ಹರಿದ್ವಾರ: ಕರೊನಾ ಸೋಂಕಿನ ಚಿಕಿತ್ಸೆಗಾಗಿ ಭಾರತದ ಪತಂಜಲಿ ಸಂಸ್ಥೆ ಕರೊನಿಲ್ ಮತ್ತು ಸ್ವಾಸರಿ ಎಂಬ ಔಷಧವನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಔಷಧವನ್ನು ಬಿಡುಗಡೆ ಮಾಡಿ ಮಾತನಾಡಿದ ಯೋಗಗುರು ರಾಮದೇವ್, ಕರೊನಾ ಸೋಂಕಿನ ಚಿಕಿತ್ಸೆಗಾಗಿ ಇಡೀ ವಿಶ್ವ ಚುಚ್ಚುಮದ್ದು ಅಥವಾ ಔಷಧಕ್ಕಾಗಿ ಕಾಯುತ್ತಿತ್ತು. ನಾವು ಕರೊನಿಲ್ ಮತ್ತು ಸ್ವಾಸರಿ ಎಂಬ ಕರೊನಾ ಕಿಟ್ ಅನ್ನು ಬಿಡುಗಡೆ ಮಾಡುವ ಮೂಲಕ ಆ ಕಾಯುವಿಕೆಯನ್ನು ಕೊನೆಗೊಳಿಸಿದ್ದೇವೆ. ಇದು ಕರೊನಾ ಚಿಕಿತ್ಸೆಗೆ ಲಭ್ಯವಾಗುತ್ತಿರುವ ಮೊಟ್ಟಮೊದಲ ಆಯುರ್ವೇದ ಔಷಧವಾಗಿದೆ. ನಿಯಂತ್ರಿತ ಕ್ಲಿನಿಕಲ್ ಟ್ರಯಲ್ ಬಳಿಕ ಈ ಔಷಧವನ್ನು ತಯಾರಿಸಲಾಗಿದೆ. ಪತಂಜಲಿ ಸಂಶೋಧನಾ ಕೇಂದ್ರ ಮತ್ತು ನಿಮ್ಸ್ ಜಂಟಿಯಾಗಿ ಈ ಔಷಧವನ್ನು ಸಿದ್ಧಪಡಿಸಿವೆ. ಈ ಔಷಧವನ್ನು ಪಡೆಯುವ ಸೋಂಕಿತರು 3ರಿಂದ 7 ದಿನಗಳೊಳಗಾಗಿ ಗುಣಮುಖರಾಗುತ್ತಾರೆ ಎಂದು ಹೇಳಿದರು.
ಕರೊನಿಲ್ ಮತ್ತು ಸ್ವಾಸರಿ ಕಿಟ್ ಅನ್ನು ಮೊದಲಿಗೆ ದೆಹಲಿ, ಅಹಮದಾಬಾದ್ ಸೇರಿ ಹಲವು ನಗರಗಳಲ್ಲಿ 280 ಸೋಂಕಿತರನ್ನು ಬಳಸಿಕೊಂಡು ನಿಯಂತ್ರಿತ ಕ್ಲಿನಿಕಲ್ ಟ್ರಯಲ್ಗೆ ಒಳಪಡಿಸಲಾಯಿತು. ಈ ಔಷಧ ತೆಗೆದುಕೊಂಡ ಎಲ್ಲರೂ ಸಂಪೂರ್ಣವಾಗಿ ಗುಣಮುಖರಾದರು. ನಮ್ಮ ಔಷಧದ ಮೂಲಕ ಕರೊನಾ ವೈರಾಣುವನ್ನು ನಿಯಂತ್ರಿಸಿದಷ್ಟೇ ಅಲ್ಲ, ಅದರಿಂದ ಉಂಟಾಗುವ ಎಲ್ಲ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿತು ಎಂದು ತಿಳಿಸಿದರು.
ಇದನ್ನೂ ಓದಿ: ಕರೊನಾ ಆತಂಕದಲ್ಲಿ ಕಿಚ್ಚ ಸುದೀಪ್!; ಇಡೀ ರಸ್ತೆ ಸೀಲ್ಡೌನ್, ವ್ಯಾಪಾರ ವಹಿವಾಟು ನಿರ್ಬಂಧ…
ಕರೊನಾ ಕಿಟ್ 545 ರೂ. ದರದಲ್ಲಿ ಲಭ್ಯವಿದೆ. ಈ ಕಿಟ್ನಲ್ಲಿನ ಔಷಧ 30 ದಿನಗಳವರೆಗೆ ಬರುತ್ತದೆ ಎಂದು ಪತಂಜಲಿಯ ಸಿಇಒ ಆಚಾರ್ಯ ಬಾಲಕೃಷ್ಣ ಹೇಳಿದರು.
ಪತಂಜಲಿಯ ಕರೊನಾ ಕಿಟ್ ಮುಕ್ತ ಮಾರುಕಟ್ಟೆಯಲ್ಲಿ ಇನ್ನೂ ಲಭ್ಯವಿಲ್ಲ. ಇನ್ನೊಂದು ವಾರದಲ್ಲಿ ಪತಂಜಲಿ ಸ್ಟೋರ್ಗಳಲ್ಲಿ ಇದು ಲಭ್ಯವಾಗಲಿದೆ. ಜತೆಗೆ ಆನ್ಲೈನ್ನಲ್ಲಿ ಖರೀದಿಸಲು ಬಯಸುವವರಿಗಾಗಿ ಆ್ಯಪ್ ಅನ್ನು ಕೂಡ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಏನಿದು ಕರೊನಿಲ್: ಕರೊನಿಲ್ ಔಷಧವನ್ನು ಅಶ್ವಗಂಧ, ಅಮೃತಬಳ್ಳಿ ಮತ್ತು ತುಳಸಿಯ ಮಿಶ್ರಣದೊಂದಿಗೆ ತಯಾರಿಸಲಾಗಿದೆ. ಈ ಔಷಧವನ್ನು ತೆಗೆದುಕೊಳ್ಳುವುದರಿಂದ ಕರೊನಾ ಸೋಂಕಿತರು ಶೇ.100 ಚೇತರಿಸಿಕೊಳ್ಳುತ್ತಾರೆ ಎಂದು ಪತಂಜಲಿ ಸಂಸ್ಥೆ ಹೇಳಿಕೊಂಡಿದೆ.