ಸಿಂದಗಿ: ಭಾರತದ ಭಾವಿಪ್ರಜೆಗಳ ಕನಸು ಮನೆ ಮತ್ತು ಶಾಲೆಗಳಲ್ಲಿ ಉದಯಿಸುತ್ತದೆ. ಅಂತೆಯೇ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸಬೇಕು ಎಂದು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸಹನಿರ್ದೇಶಕ ಎಸ್.ಎನ್. ಕೋರವಾರ ಹೇಳಿದರು.
ನಗರದ ಹೊರವಲಯದ ಲೋಯಲ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಚಿಣ್ಣರ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಮಕ್ಕಳ ಮನಸ್ಸು ಹಾಗೂ ಸದೃಢ ಆರೋಗ್ಯಕ್ಕೆ ಪೌಷ್ಟಿಕ ಆಹಾರ ತುಂಬಾ ಮುಖ್ಯ. ಈ ದಿಸೆಯಲ್ಲಿ ಪಾಲಕರು ಮಕ್ಕಳಿಗೆ ಉತ್ತಮ ಆಹಾರ ಸಂಸ್ಕೃತಿ ಬೆಳೆಸಬೇಕು ಎಂದರು.
ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ ಪ್ರಾಸ್ತವಿಕವಾಗಿ ಮಾತನಾಡಿ, ಮಕ್ಕಳಿಗಾಗಿ ಕಾನೂನು ಅನೇಕ ಹಕ್ಕುಗಳನ್ನು ನೀಡಿದ್ದು, ಆ ಹಕ್ಕುಗಳ ಮೂಲಕ ಮಕ್ಕಳು ದೇಶದ ಸಂಪತ್ತಾಗಿ ರೂಪಗೊಳ್ಳಬೇಕು ಎಂದರು.
ಆರೋಗ್ಯ ಇಲಾಖೆ ನಿರೀಕ್ಷಕ ವಿಶ್ವನಾಥ ಕೋರವಾರ, ಸಂಗಮ ಸಂಸ್ಥೆಯ ಸಿಬ್ಬಂದಿ ಮತ್ತು ಲೋಯೊಲ ಶಾಲೆಯ ಸಿಬ್ಬಂದಿ ಪಾಲ್ಗೊಂಡಿದ್ದರು. ಗ್ರಾಮೀಣ ಶಾಲಾ ಮಕ್ಕಳು ಸಂವಿಧಾನ ಪೀಠಿಕೆಯ ಕುರಿತು ರೂಪಕ ಪ್ರದರ್ಶಿಸಿ ಬಹುಮಾನ ಪಡೆದುಕೊಂಡರು. ವಿವಿಧ ಆಟೋಟಗಳಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ರಾಜೀವ ಕುರಿಮನಿ ನಿರೂಪಿಸಿದರು. ಮಲಕಪ್ಪ ಹಲಗಿ ಸ್ವಾಗತಿಸಿದರು. ವಿಜಯ ಬಂಟನೂರ ವಂದಿಸಿದರು.