ಪರಶುರಾಮಪುರ: ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೆ ದಿನಸಿ ಸಾಮಗ್ರಿಗಳನ್ನು ಖರೀದಿಸಬೇಕು ಎಂದು ಪಿ.ಆರ್.ಪುರ ಗ್ರಾಪಂ ಪಿಡಿಒ ಜಿ.ನಾಗರಾಜ ತಿಳಿಸಿದರು.
ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ಥಳೀಯ ಆಡಳಿತ, ಆರೋಗ್ಯ ಇಲಾಖೆ, ಐಸಿಟಿಸಿ ವಿಭಾಗ, ಶಿಶುಅಭಿವೃದ್ಧಿ ಇಲಾಖೆ ಸೋಮವಾರ ಆಯೋಜಿಸಿದ್ದ ಕರೊನಾ ವೈರಸ್ ತಡೆಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮದಲ್ಲಿ ಜ್ವರ ತಪಾಸಣೆ ಕೇಂದ್ರ ತೆರೆಯಲಾಗಿದೆ ಎಂದು ತಿಳಿಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತರಕಾರಿ ಮಾರುಕಟ್ಟೆ, ಹೈಸ್ಕೂಲ್ ಮೈದಾನದಲ್ಲಿ ಹಾಲು ಮಾರಾಟ, ಎಂದಿನಂತೆ ದಿನಸಿ ಅಂಗಡಿಗಳು ಪ್ರತಿ ದಿನ ಬೆಳಗ್ಗೆ 6ರಿಂದ 10ರ ವರೆಗೆ ತೆರೆಯಲಿದ್ದು, ಸಾಮಾಜಿಕ ಅಂತರ ಕಾಪಾಡಿ ಕೊಂಡುಕೊಳ್ಳಬೇಕು ಎಂದರು.
ಅನ್ಯ ಜಿಲ್ಲೆ, ಹೊರ ರಾಜ್ಯಗಳಿಂದ ಗ್ರಾಮಕ್ಕೆ ಬಂದವರ ಮೇಲೆ ತೀವ್ರ ನಿಗಾವನ್ನು ಆಶಾ, ಅಂಗನವಾಡಿ ಕಾರ್ಯಕರ್ತರು ವಹಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ದಿನ ನಿತ್ಯ ಸಂಚರಿಸುವ ಜನರ ಮೇಲೆ ನಿಗಾ ಇರಿಸಲಾಗಿದೆ ಎಂದು ತಿಳಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ಐಸಿಟಿಸಿ ವಿಭಾಗದ ಕೊರ್ಲಕುಂಟೆ ಚನ್ನಪ್ಪ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ್, ಸದಸ್ಯರಾದ ಟಿ.ಗೋವಿಂದಪ್ಪ, ಪಿ.ಪ್ರಸನ್ನಕುಮಾರ, ಐಸಿಟಿಸಿ ಚನ್ನಪ್ಪ, ಪ್ರಯೋಗ ತಜ್ಞ ದಯಾನಂದ, ಪಿಎಸ್ಐ ಮಹೇಶ್ ಹೊಸಕೋಟೆ, ಆಶಾ ಕಾರ್ಯಕರ್ತೆಯರಾದ ಮಂಜುಳಾ, ರತ್ನಮ್ಮ, ಅಂಗನವಾಡಿ ಕಾರ್ಯಕರ್ತೆ ಸರೋಜಾ ಇತರರಿದ್ದರು.