ಪರಶುರಾಮಪುರ: ವಿವಿ ಸಾಗರದಿಂದ ಬೊಂಬೇರಹಳ್ಳಿ ಬ್ಯಾರೇಜ್ ವರೆಗೆ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಗುರುವಾರ ಗಂಗಾಪೂಜೆ ನೆರವೇರಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕರು, ಜನ, ಜಾನುವಾರುಗಳಿಗೆ ಕುಡಿವ ನೀರಿಗೆ ತತ್ವಾರ ಉಂಟಾಗಬಾರದು ಎಂಬ ಆಶಯದಿಂದ ಸರ್ಕಾರ ವಿವಿ ಸಾಗರದ ನೀರನ್ನು ವೇದಾವತಿ ನದಿಯ ಮೂಲಕ ಹರಿಬಿಡಲಾಗಿದೆ ಎಂದರು.
ನದಿಪಾತ್ರದ ಹಳ್ಳಿಗಳಲ್ಲಿ ಜನರಿಗೆ ಖುಷಿಯಾಗಿದೆ. ರೈತರಿಗೆ ಸರ್ಕಾರ ಸಕಾಲಕ್ಕೆ ನೀರು ನೀಡಿದರೆ ಅವರು ಮತ್ತೆ ಸರ್ಕಾರಕ್ಕೆ ಸಾಲ ಕೊಡುವ ಮಟ್ಟಕ್ಕೂ ಹೋಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಜಿಪಂ ಸದಸ್ಯ ಪ್ರಕಾಶಮೂರ್ತಿ ಮಾತನಾಡಿ, ವೇದಾವತಿ ನದಿಗೆ ವಿವಿ ಸಾಗರದಿಂದ ನೀರುಣಿಸಿದ್ದು ಇತಿಹಾಸದ ಪುಟ ಸೇರಲಿದೆ. ಇದಕ್ಕೆ ಶಾಸಕ ಟಿ.ರಘುಮೂರ್ತಿ ಅವರ ಪರಿಶ್ರಮ, ಸರ್ಕಾರದ ಕಳಕಳಿ ಸ್ಮರಣೀಯ ಎಂದು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಟಿ.ರವಿಕುಮಾರ, ಎಪಿಎಂಸಿ ಮಾಜಿ ಸದಸ್ಯ ಎಸ್.ಚನ್ನಕೇಶವ, ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ, ಕಾಂಗ್ರೆಸ್ ಹಿರಿಯ ಮುಖಂಡ ಪ್ರಭುದೇವ, ರೈತ ಮುಖಂಡರಾದ ಕೆ.ಪಿ.ಭೂತಯ್ಯ, ಸುರೇಶಬಾಬು, ಹೊರಕೇರಪ್ಪ, ಪ್ರಕಾಶ, ತಿಪ್ಪೇಸ್ವಾಮಿ ಇದ್ದರು