ಪರಶುರಾಮಪುರ: ಶ್ರೀ ಲಕ್ಷ್ಮೀನರಸಿಂಹಸ್ವಾಮಿ 10ನೇ ಬ್ರಹ್ಮ ರಥೋತ್ಸವದ ಅಂಗವಾಗಿ ಸಮೀಪದ ಕೋಟೆ ಓಬಳಾಪುರದಲ್ಲಿ ಶನಿವಾರ ಕಲ್ಯಾಣೋತ್ಸವ, ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ರಥಾಂಗಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದೇವಸ್ಥಾನ ಸಮಿತಿ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಉರುಮೆ, ಡೋಲು, ನಂದಿಕೋಲು ಕುಣಿತ ಉತ್ಸವಕ್ಕೆ ಮರುಗು ನೀಡಿದವು.
ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸುತ್ತೇಳು ಹಳ್ಳಿಗಳಿಂದ ಎತ್ತಿನ ಗಾಡಿ, ಲಘು ವಾಹನಗಳಲ್ಲಿ ಆಗಮಿಸಿದ ಭಕ್ತರು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರು. ಶ್ರೀಸ್ವಾಮಿಗೆ ಧನ-ಕನಕಗಳ ಸಮರ್ಪಣೆ ಮಾಡಿ ಭಕ್ತಿ ಮೆರೆದರು. ಭಾನುವಾರ ಸಂಜೆ ಶ್ರೀಸ್ವಾಮಿ ಬ್ರಹ್ಮ ರಥೋತ್ಸವ ಜರುಗಿತು.