ನರೇಂದ್ರ ಎಸ್. ಮರಸಣಿಗೆ ಹೆಬ್ರಿ
15 ದಿನಗಳಿಂದ ನಿರಂತರ ಬಿಸಿಲು ಇದ್ದು ಹಲವೆಡೆ ಮಳೆ ಕೊರತೆಯಿಂದ ಜನರು ಕಂಗಾಲಾಗಿದ್ದು, ಭತ್ತ ಬೆಳೆಗೆ ಪಂಪ್ ಸೆಟ್ಟಿನ ನೀರನ್ನು ರೈತರು ಉಪಯೋಗಿಸುತ್ತಿದ್ದಾರೆ. ಕರಾವಳಿಯ ಜನತೆ ಕೃಷಿಗೆ ಮಳೆ ನೀರನ್ನೇ ಅವಲಂಬಿಸಿದೆ. ಆದರೆ ನಿರಂತರ ಮಳೆ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಲವೆಡೆ ಪಂಪ್ಸೆಟ್ ನೀರಿನ ಮೂಲಕ ಕೃಷಿ ಕಾಯಕ ಚಾಲ್ತಿಯಲ್ಲಿದೆ.
ಕರಾವಳಿಯ ಜನತೆ ನಾಟಿ ಮಾಡಲು ಮುಂದಾಗಿದ್ದರೂ ಗದ್ದೆ ಉಳುಮೆ ಮಾಡಲು ನೀರಿನ ಕೊರತೆಯಿಂದ ಸಾಧ್ಯವಾಗುತ್ತಿಲ್ಲ.
ನೀರಿಲ್ಲದೆ ಹಲವೆಡೆ ಭತ್ತದ ಗದ್ದೆಗಳು ಒಣಗಿಹೋಗಿವೆ. ಇನ್ನೊಂದೆಡೆ ವಿದ್ಯುತ್ ಸಮಸ್ಯೆ ಗ್ರಾಮೀಣ ಭಾಗದ ಜನರನ್ನು ಕಾಡುತ್ತಿದೆ. ಹಲವೆಡೆ ಸಂರ್ಪಕ ನಿರ್ವಹಣೆ ಕೊರತೆಯಿಂದ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ.
ಲಾಕ್ಡೌನ್ನಿಂದಾಗಿ ಬಹುತೇಕರು ಮನೆಯಲ್ಲಿದ್ದು ಕೃಷಿ ಚಟುವಟಿಕೆ ತೊಡಗಿಕೊಂಡರೂ ಮಳೆ ಕೊರತೆ, ವಿದ್ಯುತ್ ಕೊರತೆಯಂತಹ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭಗಳು ಕೃಷಿ ಮೇಲಿನ ಆಸಕ್ತಿಯನ್ನು ಕಡಿಮೆ ಮಾಡುತ್ತಿದೆ.
ಇಂತಹ ಸಂದರ್ಭದಲ್ಲಿ ವರಂಗ ಗ್ರಾಪಂ ವ್ಯಾಪ್ತಿಯ ಪಡುಕುಡೂರು ಭಾಗದ ಅನೇಕ ರೈತರು ಪಂಪ್ಸೆಟ್ ನೀರು ಹಾಯಿಸಿ ಕೃಷಿ ಮಾಡುತ್ತಿರುವುದು ಎಲ್ಲರ ಗಮನಸೆಳೆದಿದೆ. ಈಗಾಗಲೇ ಡೀಸೆಲ್ ದರ ಏರಿಕೆಯಾದ ಕಾರಣ ಉಳುಮೆಯ ಖರ್ಚು ಹೆಚ್ಚಾಗಿದೆ. ಗದ್ದೆಯಲ್ಲಿ ನೀರು ಕಡಿಮೆ ಇರುವ ಕಾರಣ ಟ್ರ್ಯಾಕ್ಟರ್ಗಳು ಉಳುಮೆ ಮಾಡಲು ಅಧಿಕ ಸಮಯ ತೆಗೆದುಕೊಳ್ಳುತ್ತದೆ.
ಸದ್ಯದ ಪರಿಸ್ಥಿತಿಗೆ ಕೃಷಿ ಕೂಲಿ ಕಾರ್ಮಿಕರ ಕೊರತೆ ಉಂಟಾಗಿದ್ದು ಕೂಲಿ ಕಾರ್ಮಿಕರನ್ನು ನಿಯೋಜಿಸುವುದು ಸಾಹಸವಾಗಿದೆ. ದುಪ್ಪಟ್ಟು ದರ ನೀಡಿದರೂ ಕೃಷಿ ಕೂಲಿ ಕಾರ್ಮಿಕರು ಸಿಗುತ್ತಿಲ್ಲ.
ಗ್ರಾಮೀಣ ಭಾಗದಲ್ಲಿ ಆಗಾಗ ವಿದ್ಯುತ್ ಸಮಸ್ಯೆ ಕಂಡುಬರುತ್ತಿದ್ದು ಉಳುಮೆ ಮಾಡಲು ಪಂಪ್ಸೆಟ್ನ ನೀರಿಗೆ ಅವಲಂಬಿತರಾಗಿದ್ದು ಕೆಲವೊಮ್ಮೆ ಕೃಷಿಕಾರ್ಮಿಕರು ನಿಯೋಜನೆಗೊಂಡರೂ ವಿದ್ಯುತ್ ಸಮಸ್ಯೆಯಿಂದ ದಿನವಿಡೀ ಕೆಲಸ ಮಾಡದೆ ಇದ್ದ ದಿನಗಳಿವೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಕೃಷಿಯನ್ನು ಮಾಡುವುದೇ ಸಾಹಸವಾಗಿದೆ. ಅದರಲ್ಲೂ ಮಳೆ ಕೊರತೆ, ವಿದ್ಯುತ್ ಕೊರತೆ, ಕೃಷಿ ಕಾರ್ಮಿಕರ ಕೊರತೆ, ಅಧಿಕ ನಿರ್ವಹಣಾ ವೆಚ್ಚ ಇಂತಹ ಸಮಸ್ಯೆಗಳಿಂದ ರೈತರು ಕಂಗೆಟ್ಟಿದ್ದಾರೆ. ಕೃಷಿಯು ಜೀವನಕ್ಕೆ ಆಧಾರವಾಗಿರುವುದರಿಂದ ಇಂತಹ ಸಮಸ್ಯೆಗಳು ಭವಿಷ್ಯತ್ತಿನ ದೃಷ್ಟಿಯಲ್ಲಿ ಮಾರಕ.
ಟಿ. ಭುಜಂಗ ಶೆಟ್ಟಿ, ರೈತ