ರಾಂಚಿ: ವೇಗವಾಗಿ ಚಲಿಸುತ್ತಿದ್ದ ರೈಲೊಂದು ಹಠಾತ್ ಎಂದು ಬ್ರೇಕ್ ಹಾಕಿದ ಪರಿಣಾಮ ಇಬ್ಬರು ಪ್ರಯಾಣಿಕರು ಮೃತಪಟ್ಟಿರುವ ಘಟನೆ ಜಾರ್ಖಂಡ್ನ ಪರ್ಸಾಬಾದ್ ಬಳಿ ನಡೆದಿದೆ.
ನವದೆಹಲಿ ಹಾಗೂ ಪುರಿ ನಡುವೆ ಸಂಚರಿಸುವ ಪುರುಷೋತ್ತಮ್ ಎಕ್ಸ್ಪ್ರೆಸ್ನಲ್ಲಿ ಈ ಅವಘಡ ಸಂಭವಿಸಿದ್ದು, ಹಠಾತ್ ಬ್ರೇಕ್ ಹಾಕಿದ ಪರಿಣಾಮ ರೈಲಿನಲ್ಲಿ ಉಂಟಾದ ಜರ್ಕ್ನಿಂದ ಇಬ್ಬರು ಪ್ರಯಾಣಿಕರು ಮರತಪಟ್ಟಿದ್ದಾರೆ ಎಂದು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ‘ಕನ್ನಡದ ಸ್ವಾಮೀಜಿ’ ಎಂದೇ ಖ್ಯಾತರಾಗಿದ್ದ ಅಲ್ಲಮಪ್ರಭು ಸ್ವಾಮೀಜಿ ಲಿಂಗೈಕ್ಯ
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, ಪರುಷೋತ್ತಮ್ ಎಕ್ಸ್ಪ್ರೆಸ್ ರೈಲು ಘಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಓವರ್ಹೆಡ್ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಲೋಕೋಪೈಲೆಟ್ ತಕ್ಷಣವೇ ಎಚ್ಚೆತ್ತು ಬ್ರೇಕ್ ಹಾಕಿದ್ದಾರೆ. ಇದರಿಂದ ಜರ್ಕ್ ಉಂಟಾಗಿದ್ದು, ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಿಂದ ಪರ್ಸಾಬಾದ್ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರವು ನಾಲ್ಕು ಘಂಟೆಗಳು ಸ್ಥಗಿತಗೊಂಡಿದ್ದು, ಆ ನಂತರ ಪುನಾರಂಭಗೊಂಡಿತ್ತು. ಘಟನೆ ಸಂಬಂಧ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ರಲ್ವೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.