ಕೋಲ್ಕತ್ತ: ಇಡೀ ದೇಶ ಕರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಈ ಸಮಯದಲ್ಲಿ ಹಲವಾರು ಗಣ್ಯರು, ಜನಸಾಮಾನ್ಯರೂ ಕೂಡ ತಮ್ಮ ಕೈಲಾದಷ್ಟು ದೇಣಿಗೆಗಳನ್ನು ನೀಡುತ್ತಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗ ಒಟ್ಟು 10 ಲಕ್ಷ ರೂಪಾಯಿಯನ್ನು ಕರೊನಾ ವಿರುದ್ಧ ಹೋರಾಟಕ್ಕೆ ನೀಡಲು ನಿರ್ಧರಿಸಿದ್ದಾರೆ.
5 ಲಕ್ಷ ರೂಪಾಯಿಯನ್ನು ಪ್ರಧಾನಮಂತ್ರಿ ರಾಷ್ಟ್ರೀಯ ತುರ್ತುಪರಿಹಾರ ನಿಧಿಗೆ ಮತ್ತು 5 ಲಕ್ಷ ರೂ.ನ್ನು ಪಶ್ಚಿಮಬಂಗಾಳ ರಾಜ್ಯ ತುರ್ತು ಪರಿಹಾರ ನಿಧಿಗೆ ದೇಣಿಗೆ ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ.
ಇಡೀ ದೇಶ ಕರೊನಾ ವಿರುದ್ಧ ಹೋರಾಡುತ್ತಿದೆ. ನನ್ನ ಬಳಿ ತುಂಬ ಸಂಪತ್ತು, ಹಣ ಇಲ್ಲ. ಹಾಗಾಗಿ 10 ಲಕ್ಷ ರೂಪಾಯಿಯನ್ನು ದೇಣಿಗೆ ನೀಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ನಾನು ಶಾಸಕಿಯಾಗಿ, ಮುಖ್ಯಮಂತ್ರಿಯಾಗಿ ವೇತನವನ್ನು ತೆಗೆದುಕೊಳ್ಳುವುದಿಲ್ಲ. ಏಳು ಬಾರಿ ಸಂಸದೆಯಾಗಿದ್ದರೂ ನನ್ನ ಸಂಸದ ಪಿಂಚಣಿಯನ್ನು ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ನಾನು ಅಷ್ಟೊಂದು ಶ್ರೀಮಂತೆಯಲ್ಲ. ನನ್ನ ಬಳಿ ಸಂಪತ್ತು ಕಡಿಮೆ. ನನ್ನ ಸೃಜನಶೀಲ ಹವ್ಯಾಸಗಳೇ ಆದಾಯದ ಮೂಲ. ಸಂಗೀತ, ಪುಸ್ತಕಗಳಿಂದ ಸಿಗುವ ಗೌರವ ಧನವೇ ನನ್ನ ಆದಾಯ ಎಂದು ಇನ್ನೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿಯವರು 2011ರಿಂದಲೂ ತಮ್ಮ ವೇತನವನ್ನು ತೆಗೆದುಕೊಳ್ಳುತ್ತಿಲ್ಲ. ಹಾಗೇ ಸಂಸದರ ಪಿಂಚಣಿಯನ್ನೂ ಮುಟ್ಟುತ್ತಿಲ್ಲ. ಪ್ರತಿತಿಂಗಳ ವೇತನವೆಂದು 1 ರೂ.ಪಡೆದು ಉಳಿದ ಅಷ್ಟೂ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೇ ನೀಡುತ್ತಿದ್ದಾರೆ. (ಏಜೆನ್ಸೀಸ್)