ಕುದೂರು: ಔಷಧ ಕೇಳುವ ನೆಪದಲ್ಲಿ ವೈದ್ಯರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಭಾನುವಾರ ರಾತ್ರಿ ಸಿನಿಮೀಯ ಮಾದರಿಯಲ್ಲಿ ದರೋಡೆ ಮಾಡಿದ್ದಾರೆ.
ಕುದೂರು ಹೋಬಳಿ ಕಣ್ಣೂರು ಗೇಟ್ ಬಳಿ ವೈದ್ಯ ಲೇಟ್ ಸುಭಾಷ್ಸಿಂಗ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಸುಭಾಷ್ಸಿಂಗ್ ಪತ್ನಿ ಶಶಿಕಲಾ ಹಾಗೂ ಮಕ್ಕಳಾದ ಲೋಕನಾಥ್ಸಿಂಗ್, ಪೃಥ್ವಿಸಿಂಗ್ ಊಟ ಮುಗಿಸಿ ಮನೆ ಹೊರಗಡೆ ಕುಳಿತಿದ್ದಾಗ, ಮಗು ಎತ್ತಿಕೊಂಡು ಬಂದ ಮಹಿಳೆಯೊಬ್ಬಳು, ‘ಆಯಾಸವಾಗುತ್ತಿದೆ, ವೈದ್ಯರ ಬಳಿ ಔಷಧ ಪಡೆಯಲು ಬಂದಿದ್ದೇನೆ’ ಎಂದಿದ್ದಾಳೆ. ಆಗ ವೈದ್ಯ ಸುಭಾಷ್ಸಿಂಗ್ ಮೃತಪಟ್ಟು ಮೂರು ವರ್ಷವಾಗಿದೆ’ ಎಂದು ಶಶಿಕಲಾ ತಿಳಿಸಿದ್ದಾರೆ. ಈ ವೇಳೆ ಮಹಿಳೆ ಕುಡಿಯಲು ನೀರು ಕೇಳಿದಾಗ, ಶಶಿಕಲಾ ನೀರು ತರುವಷ್ಟರಲ್ಲಿ ಮಹಿಳೆ ಕಡೆಯ ಇಬ್ಬರು ಯುವಕರು ಮಕ್ಕಳಿಗೆ, ಶಶಿಕಲಾಗೆ ಖಾರದ ಪುಡಿ ಎರಚಿ ಮನೆಯೊಳಗೆ ಎಳೆದೊಯ್ದಿದ್ದಾರೆ.
ಮಾರಕಾಸ ಹಿಡಿದು ಮನೆಯೊಳಗೆ ನುಗ್ಗಿದ 15 ಜನರ ತಂಡ, ಶಶಿಕಲಾ, ಲೋಕನಾಥ ಸಿಂಗ್ ಹಾಗೂ ಪೃಥ್ವಿ ಸಿಂಗ್ ಅವರನ್ನು ಕಟ್ಟಿಹಾಕಿ ಹಲ್ಲೆ ನಡೆಸಿದೆ. ಮನೆ ಯಲ್ಲಿದ್ದ 50 ಸಾವಿರ ರೂಪಾಯಿ, ಮೊಬೈಲ್, ಬಂಗಾರ, ಬೆಳ್ಳಿ ಆಭರಣ, ವಸ್ತುಗಳು, ಸಿಸಿ ಕ್ಯಾಮೆರಾ, ಕಂಪ್ಯೂಟರ್ ಮಾನಿಟರ್ ಹಾಗೂ ಕಾರಿನೊಂದಿಗೆ ಪರಾರಿ ಆಗಿದ್ದಾರೆ.
ಹಲ್ಲೆಗೆ ಒಳಗಾದವರ ಕಿರುಚಾಟ ಕೇಳಿ ಮನೆಗೆ ಹೋಗಿ ನೋಡಿದ ಅಕ್ಕಪಕ್ಕದ ನಿವಾಸಿಗಳು, ನೆಲಮಂಗಲ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕುದೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಖದೀಮರ ಬಂಧನಕ್ಕೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸಾಕಷ್ಟು ಭದ್ರತೆ ನಡುವೆಯೇ ಕೃತ್ಯ: ಮನೆಯಲ್ಲಿ 15 ನಾಯಿ ಸಾಕಲಾಗಿದ್ದು, ಎಲ್ಲ ದಿಕ್ಕಿಗೂ 14 ಕ್ಯಾಮೆರಾ ಅಳವಡಿಸಲಾಗಿದೆ. ಇಷ್ಟೆಲ್ಲ ಭದ್ರತೆ ನಡುವೆ ಕಳ್ಳತನ ನಡೆದಿರುವುದರಿಂದ ಇದು ಸ್ಥಳೀಯರು ಮಾಡಿರುವ ಕೃತ್ಯ ಎಂದು ಮನೆಯವರು ಅನುಮಾನ ವ್ಯಕ್ತಪಡಿಸಿದ್ದಾರೆ.