ತುಮಕೂರು: ಐತಿಹಾಸಿಕ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕೆ ಗೆಲುವು ತಂದುಕೊಟ್ಟ ವೀರ ಯೋಧರ ತ್ಯಾಗ, ಬಲಿದಾನ ಸ್ಮರಿಸುವ ‘ವಿಜಯ್ ದಿವಸ್’ ಕಾರ್ಯಕ್ರಮ ತುಮಕೂರಿನ 4ನೇ ಬೆಟಾಲಿಯನ್ ಎನ್ಸಿಸಿ ವತಿಯಿಂದ ಭಾನುವಾರ ನಡೆಯಿತು.
ನಗರದ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿರುವ ಎನ್ಸಿಸಿ ಕಚೇರಿ ಆವರಣದಲ್ಲಿ ಭಾರತೀಯ ವೀರ ಯೋಧರು ಹಾಗೂ ಅವರ ಕುಟುಂಬ ಸದಸ್ಯರೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮರಳೂರು ಶಾಖೆ ಇನ್ನರ್ವೀಲ್ ಸಹಯೋಗ ನೀಡಿತ್ತು.
ರಾಷ್ಟ್ರ ಧ್ವಜಕ್ಕೆ ನಮನ ಸಲ್ಲಿಸುವ ಮೂಲಕ ಕರ್ನಲ್ ಎ.ಆರ್.ಹರೀಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರನ್ನು ಸ್ಮರಿಸುವ ಮೂಲಕ ಅವರಿಗೆ ಮತ್ತಷ್ಟು ಆತ್ಮವಿಶ್ವಾಸ ತುಂಬುವ ಕಾರ್ಯಕ್ರಮದಲ್ಲಿ ದೇಶವಾಸಿಗಳೆಲ್ಲರೂ ಭಾಗವಹಿಸಬೇಕು ಎಂದರು.ಸುಬೇದಾರ್ ಮೇಜರ್ ಬಹದ್ದೂರ್ ಸಿಂಗ್ ಮಾತನಾಡಿ, ದೇಶಕ್ಕಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ. ಈ ಕಾರ್ಯದಲ್ಲಿ ಪ್ರಾಣತೆತ್ತ ಸಾವಿರಾರು ಯೋಧರು ನಮ್ಮ ಹೆಮ್ಮೆ ಎಂದು ಸ್ಮರಿಸಿಕೊಂಡರು. ಮರಳೂರು ಶಾಖೆ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಪ್ರಿಯಾ ಮಾತನಾಡಿ, ವೀರಯೋಧರ ಜತೆಯಲ್ಲಿ ದೇಶಕ್ಕಾಗಿ ಹೋರಾಡಿ ವಿಜಯ ತಂದುಕೊಟ್ಟ ಯೋಧರನ್ನು ನೆನೆಯುವ ಕೆಲಸದಲ್ಲಿ ನಾವು ಭಾಗಿಯಾಗುತ್ತಿರುವುದು ಸ್ಮರಣೀಯ ಎಂದರು.
ಎನ್ಸಿಸಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧರನ್ನು ಇನ್ನರ್ ವೀಲ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಗಿಲ್ ವಿಜಯ್ ದಿವಸ್ 21ನೇ ವರ್ಷಾಚರಣೆ ಅಂಗವಾಗಿ ವಿಜಯವಾಣಿ ಹೊರತಂದಿರುವ ‘ವೀರ ಯೋಧರಿಗೆ ಸಲಾಂ’ 4 ಪುಟಗಳ ವಿಶೇಷ ಪುರವಣಿಯನ್ನು ಯೋಧರಿಂದ ಬಿಡುಗಡೆಗೊಳಿಸಲಾಯಿತು.
ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಡಾ.ಜಯಪ್ರಕಾಶ್, ಲೆಫ್ಟಿನೆಂಟ್ ಎಸ್.ರಾಮಲಿಂಗರೆಡ್ಡಿ, ಲೆಫ್ಟಿನೆಂಟ್ ಪ್ರದೀಪ್ಕುಮಾರ್, ಎನ್.ಜಯಶ್ರೀ, ಎನ್ಸಿಸಿ ಕೆಡೆಟ್ಗಳಾದ ಎಸ್ಯುಒ ಜಿ.ವಿ.ಪ್ರಮೋದ್, ಜೆಯುಒ ಟಿ.ಸ್ನೇಹಶ್ರೀ
ಮತ್ತಿತರರು ಇದ್ದರು.
ಕಳೆದ ವರ್ಷ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ವಿಜಯವಾಣಿ, ದಿಗ್ವಿಜಯ ವತಿಯಿಂದ ತುಮಕೂರು ನಗರದಲ್ಲಿ ಆಯೋಜಿಸಿದ್ದ ವಾಕಥಾನ್ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಈ ವರ್ಷ ಕೂಡ ‘ವೀರ ಯೋಧರಿಗೆ ಸಲಾಂ’ ವಿಶೇಷ ಪುರವಣಿ ಹೊರತಂದಿರುವುದು ಖುಷಿ ನೀಡಿದೆ.
ಸುಬೇದಾರ್ ಮೇಜರ್ ಬಹದ್ದೂರ್ ಸಿಂಗ್ ತುಮಕೂರು