ಬೆಳಗಾವಿ: ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ಸಂಶೋಧನಾ ಕೇಂದ್ರವು ಅಂಗಾಂಗ ಕಸಿ ಮಾಡುವಲ್ಲಿ ಮುಂಚೂಣಿಯಲ್ಲಿದೆ ಎಂದು ಕಾಹೇರ್ ಕುಲಸಚಿವ ಡಾ. ವಿ.ಎ. ಕೋಠಿವಾಲೆ ಹೇಳಿದ್ದಾರೆ.
ಅಂಗಾಂಗ ದಾನಗಳ ಕುರಿತು ಜಾಗೃತಿ ಮೂಡಿಸುತ್ತ ನಾಸಿಕ್ನಿಂದ ಬೆಳಗಾವಿಗೆ ಆಗಮಿಸಿದ ಮುಂಬೈನ ಫೆಡರೇಷನ್ ಆಫ್ ಬಾಡಿ ಆ್ಯಂಡ್ ಆರ್ಗನ್ ಡೊನೇಷನ್ನ 6 ಸದಸ್ಯರನ್ನು ಸ್ವಾಗತಿಸಿ, ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಅನೇಕ ದೇಶಗಳಲ್ಲಿ ಸ್ವಯಂಪ್ರೇರಿತರಾಗಿ ಅಂಗಾಂಗ ದಾನ ಮಾಡಲು ಜನರು ಮುಂದೆ ಬರುತ್ತಾರೆ. ಇಲ್ಲಿಯೂ ಸಂಘ-ಸಂಸ್ಥೆಗಳು ಆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ನಾಸಿಕ್ನಿಂದ ಆಗಮಿಸಿದ ಸುನೀಲ ದೇಶಪಾಂಡೆ, ಪ್ಲಾಸ್ಟಿಕ್ ಸರ್ಜನ್ ಡಾ.ರಾಜೇಶ ಪವಾರ, ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಆರ್.ಎಸ್.ಮುಧೋಳ ಮಾತನಾಡಿದರು. ಶಶಾಂಕ, ವಸಂತರಾವ, ಚಂದ್ರಶೇಖರ, ಶೈಲೇಶ ಹಾಗೂ ಯೋಗೇಶ ಅಗರವಾಲ್ ಅವರನ್ನು ಸತ್ಕರಿಸಲಾಯಿತು.
ಕೆಎಲ್ಇ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ, ಪುರುಷೋತ್ತಮ ಪವಾರ, ಮೀರಾ ಸುರೇಶ ಸುಧೀರ ಭಗೈತಕರ, ಡಾ.ಅಶ್ವಿನಿ ನರಸಣ್ಣವರ ಉಪಸ್ಥಿತರಿದ್ದರು. ಪ್ರಮೋದ ಸುಳಿಕೇರಿ ನಿರೂಪಿಸಿ, ವಂದಿಸಿದರು. ಬೆಳಗ್ಗೆ ಶ್ರೀನಗರ ಉದ್ಯಾನದಿಂದ ಜಾಥಾ ಪ್ರಾರಂಭಗೊಂಡು ಜೆಎನ್ಎಂಸಿ ತಲುಪಿತು. ಕಾಹೇರ್ನ ಎನ್ಎಸ್ಎಸ್ ಘಟಕ, ನರ್ಸಿಂಗ್ ವಿದ್ಯಾರ್ಥಿಗಳು ಇತರರು ಪಾಲ್ಗೊಂಡಿದ್ದರು.