ಕೆಎಂಎಫ್ – ಅಮೂಲ್ ವಿಲೀನಕ್ಕೆ ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದ್ದು, ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿರುವ ಲಕ್ಷಾಂತರ ರೈತರಿಗೆ ಇದರಿಂದ ತೀವ್ರ ಅನ್ಯಾಯವಾಗಲಿದೆ. ಈ ನಿಟ್ಟಿನಲ್ಲಿ ಕೆಎಂಎಫ್ ಉಳಿಸುವ ಹೋರಾಟಕ್ಕೆ ರಾಜ್ಯದ ಜನರು ಬೆಂಬಲ ನೀಡಬೇಕು ಎಂದು ಮೈಮುಲ್ ನಿರ್ದೇಶಕ ಆರ್. ಚಲುವರಾಜು ಮನವಿ ಮಾಡಿದರು.
ಏರಿಕೆ ಕಾಣದ ಹಾಲಿನ ಉತ್ಪಾದನೆ
ರಾಜ್ಯ ಬಿಜೆಪಿ ಸರ್ಕಾರದ ನಿಲುವಿನಿಂದ ರಾಜ್ಯದಲ್ಲಿ ಹಾಲಿನ ಉತ್ಪಾದನೆ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆ ಕಾಣುತ್ತಿಲ್ಲ. 2019-20ನೇ ಸಾಲಿನಲ್ಲಿ ಪ್ರತಿದಿನ ಸರಾಸರಿ 78 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತಿತ್ತು. 2022-23ನೇ ಸಾಲಿನಲ್ಲಿ 80 ಲಕ್ಷ ಲೀಟರ್ಗಳಿಗೆ ಏರಿಕೆ ಆಗಿದೆ. ನಾಲ್ಕು ವರ್ಷಗಳಲ್ಲಿ ಕೇವಲ ಎರಡು ಲಕ್ಷ ಲೀಟರ್ಗಳು ಮಾತ್ರ ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಗುಜರಾತ್ನಲ್ಲಿ 2.15 ಕೋಟಿ ಲೀಟರ್ನಿಂದ 3 ಕೋಟಿ ಲೀಟರ್ಗೆ ಏರಿಕೆಯಾಗಿದೆ. ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚದಿರಲು ಸರ್ಕಾರದ ದುರಾಡಳಿತವೇ ಕಾರಣ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಷ್ಟದಲ್ಲಿ ರೈತರು
ಹಾಲು ಉತ್ಪಾದಿಸುವ ರೈತರಿಗೆ ಉತ್ತೇಜನ ನೀಡಲು ಸರ್ಕಾರ ಆಸಕ್ತಿ ತೋರುತ್ತಿಲ್ಲ. ನಮ್ಮ ರಾಜ್ಯದ ರೈತರಿಗೆ ಪ್ರತಿ ಲೀಟರ್ ಹಾಲಿಗೆ 32 ರೂ. ದೊರೆಯುತ್ತಿದೆ. ಆದರೆ, ಗುಜರಾತ್ನಲ್ಲಿ 48 ರೂ. ದೊರೆಯುತ್ತಿದೆ. ಪಶು ಆಹಾರ, ರಾಸಾಯನಿಕ ಗೊಬ್ಬರ, ವೈದ್ಯಕೀಯ ಸೌಲಭ್ಯ, ಕೃಷಿ ಉತ್ಪನ್ನಗಳ ಬೆಲೆ ಏರಿಕೆಯಾದರೂ ಹಾಲಿನ ದರದಲ್ಲಿ ನಿರೀಕ್ಷಿತ ಏರಿಕೆ ಕಾಣುತ್ತಿಲ್ಲ. ಈ ಕಾರಣಕ್ಕೆ ರೈತರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭ ಮೈಮುಲ್ ಮಾಜಿ ನಿರ್ದೇಶಕರಾದ ಕೆ.ಬಿ. ಪ್ರಭಾಕರ್, ನಾಗರಾಜ್, ಸಲಾಂ ಇದ್ದರು.