ಕೆ.ಎಂ.ದೊಡ್ಡಿ: ಆಧುನಿಕ ತಂತ್ರಜ್ಞಾನದಲ್ಲಿ ಕಂಪ್ಯೂಟರ್ ಕಲಿತ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಷನ್ ಮತ್ತು ಮೂನ್ ಲೈಟ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೆಷನ್ ಟೆಕ್ನಾಲಜಿ ಸಹಯೋಗದೊಂದಿಗೆ ಎಚ್.ಪಿ ಕಂಪ್ಯೂಟರ್ ವರ್ಲ್ಡ್ ವತಿಯಿಂದ ವಿರಶೈವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಂಪ್ಯೂಟರ್ ಕಾರ್ಯಾಗಾರ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಾಣಿಜ್ಯ ಕ್ಷೇತ್ರದಲ್ಲಿ ಅಕೌಂಟ್ಸ್ ಬಗ್ಗೆ ಅಪಾರ ಜ್ಞಾನ ಹೊಂದಿದ್ದಲ್ಲಿ ಟ್ಯಾಲಿ ಮತ್ತು ಎಸ್ಎಪಿಯಂತಹ ಸಾಫ್ಟ್ವೇರ್ ಕಲಿಕೆ ಸರಳವಾಗುವುದು. ಆ ಮೂಲಕ ಚಾರ್ಟರ್ಡ್ ಅಕೌಂಟೆನ್ಸಿ ಬಗ್ಗೆ ಜ್ಞಾನ ಪಡೆದುಕೊಂಡರೆ ವಿವಿಧ ಸಂಸ್ಥೆಯಲ್ಲಿ ಲಭ್ಯವಿರುವ ಅಕೌಂಟೆಂಟ್ ಹಾಗೂ ಎಎಸ್ಎಪಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ ಎಂದರು.
ವಿದ್ಯಾರ್ಥಿಗಳಿಗೆ ಮತ್ತು ಯುವ ಜನರಿಗೆ ಕಂಪ್ಯೂಟರಿನ ಜ್ಞಾನ ಅವಶ್ಯಕವಾಗಿದೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಕಂಪ್ಯೂಟರ್ ಜ್ಞಾನಕ್ಕೆ ಹೆಚ್ಚಿನ ಆದ್ಯತೆ ಇದ್ದು, ಆ ದಿಶೆಯಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಪಡೆಯುವುದು ಅಗತ್ಯವಾಗಿದೆ ಎಂದರು.
ಗ್ರಾಮಿಣ ಭಾಗದ ವಿದ್ಯಾರ್ಥಿಗಳಿಗೆ ವಾಣಿಜ್ಯ ಕ್ಷೇತ್ರದಲ್ಲಿ ಲೆಕ್ಕಪತ್ರಗಳ ನಿರ್ವಹಣೆಯ ಜ್ಞಾನ ಇರಬೇಕು. ಈ ನಿಟ್ಟಿನಲ್ಲಿ ಕಂಪ್ಯೂಟರ್ ಜ್ಞಾನ ಇದ್ದರೆ ಯಾವ ಕ್ಷೇತ್ರದಲ್ಲೂ ಉದ್ಯೋಗ ಗಿಟ್ಟಿಸಿಕೊಳ್ಳಬಹುದು ಎಂದು ಕಿವಿ ಮಾತು ಹೇಳಿದರು. ಇದೇ ವೇಳೆ ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಪ್ರಮಾಣ ಪತ್ರ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಐಐಟಿ ಎಚ್ಒ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಎಂ.ಪರಮೇಶ್ ವಹಿಸಿದ್ದರು. ಈ ಸಂದರ್ಭದಲ್ಲಿ ಭಾರತೀ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗಮಾದಯ್ಯ, ಅಣ್ಣೂರಿನ ಸರ್ಕಾರಿ ಪದವಿಪೂರ್ವಕಾಲೇಜಿನ ಉಪನ್ಯಾಸಕ ಡಾ.ದೊಡ್ಡಬೋರಯ್ಯ, ರೋಟರಿ ಸಂಸ್ಥೆಯ ಅಧ್ಯಕ್ಷ ದೇವರಹಳ್ಳಿ ಸಾಧು ನಂದೀಶ್, ಎಚ್.ಪಿ ಕಂಪ್ಯೂಟರ್ ವರ್ಲ್ಡ್ ಮ್ಯಾನೇಂಜಿಂಗ್ ಡೈರಕ್ಟರ್ ಪಿ.ಕಿರಣ್ ಇತರರಿದ್ದರು.