ಗುಳೇದಗುಡ್ಡ: ಬ್ಯಾಂಕ್ ಖಾತೆ ಇಲ್ಲದೆ ಅನ್ನಭಾಗ್ಯ ಹಣ ಪಡೆಯುವಲ್ಲಿ ವಿಫಲರಾಗಿರುವವರು ತಮ್ಮ ವ್ಯಾಪ್ತಿಯ ಅಂಚೆ ಇಲಾಖೆಯಲ್ಲಿ ಐಪಿಪಿಬಿ ಉಳಿತಾಯ ಖಾತೆ ತೆರೆದು ಅಲ್ಲಿ ಎನ್ಪಿಸಿಐ ಲಿಂಕ್ ಮಾಡಿಸಿ ಹಣ ಜಮಾ ಆಗುವಂತೆ ಮಾಡಿಕೊಳ್ಳಬೇಕೆಂದು ತಾಲೂಕು ಆಹಾರ ನಿರೀಕ್ಷಕ ಮಂಜುನಾಥ ರೊಟ್ಟಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ನ್ಯಾಯಬೆಲೆ ಅಂಗಡಿ ಪಡಿತರ ಗ್ರಾಹಕರ ಸಭೆ ನಡೆಸಿ ಮಾತನಾಡಿದ ಅವರು, ಸರ್ಕಾರದ ಯೋಜನೆ ಪ್ರಯೋಜನ ಪಡೆಯಲು ಬ್ಯಾಂಕ್ ಖಾತೆ ತೆರೆಯುವುದು ಅನಿವಾರ್ಯ ಎಂದರು. ಸಭೆಯಲ್ಲಿಯೇ ಪಡಿತರ ಗ್ರಾಹಕರು ಅಂಚೆ ಇಲಾಖೆಯ ಐಪಿಪಿಬಿ ಖಾತೆ ತೆರೆಯುವಂತೆ ಮಾಡಿದರು.
ಈಗಾಗಲೇ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಖಾತೆ ತೆರೆದ ಕೆಲ ಗ್ರಾಹಕರ ಖಾತೆಗೆ ಎನ್ಪಿಸಿಐ ಲಿಂಕ್ ಆಗದೆ ಅನ್ನಭಾಗ್ಯದ ಹಣ ಜಮಾ ಆಗಿಲ್ಲ. ಅಂತವರು ಕೂಡ ತಮ್ಮ ಭಾಗದ ಅಂಚೆ ಇಲಾಖೆಯಲ್ಲಿ ಐಪಿಪಿಬಿ ಉಳಿತಾಯ ಖಾತೆ ತೆರೆದು ಎನ್ಪಿಸಿಐ ಲಿಂಕ್ ಮಾಡಿಸಬೇಕು. ಆ ಬಳಿಕ ಗ್ರಾಹಕರ ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಅನ್ನಭಾಗ್ಯದ ಹಣ ಜಮಾ ಆಗುತ್ತದೆ ಎಂದರು.
ಪಟ್ಟಣದ ಎಲ್ಲ ನ್ಯಾಯ ಬೆಲೆ ಅಂಗಡಿಕಾರರು ತಮ್ಮ ವ್ಯಾಪ್ತಿಯ ಪಡಿತರದಾರರನ್ನು ಕರೆಯಿಸಿ 40 ಕ್ಕೂ ಹೆಚ್ಚು ಐಪಿಪಿಐ ಖಾತೆ ತೆರೆಯುವಂತೆ ಮಾಡಿದರು. ಅಲ್ಲದೆ, ನ್ಯಾಯಬೆಲೆ ಅಂಗಡಿಗೆ ನಡೆದು ಬರಲು ಸಾಧ್ಯವಾಗದ ಜನರ ಮನೆಗೆ ತೆರಳಿ ಅಲ್ಲಿಯೇ ಅಂಚೆ ಖಾತೆ ಮಾಡಿಸಲಾಯಿತು.
ಅಂಚೆ ಇಲಾಖೆ ಪೋಸ್ಟ್ ಮಾಸ್ಟರ್, ನ್ಯಾಯಬೆಲೆ ಅಂಗಡಿಕಾರರು ಇದ್ದರು.