ಲಿಂಗಸುಗೂರು: ರಾಜ್ಯದಲ್ಲಿ ಆನ್ಲೈನ್ ವ್ಯವಹಾರ ರದ್ದುಗೊಳಿಸಿ ಬೃಹತ್ ಮಳಿಗೆಗಳಲ್ಲಿ ನೀಡುವ ಅನೈತಿಕ ರಿಯಾಯಿತಿ ನಿಯಂತ್ರಿಸಬೇಕೆಂದು ಆಗ್ರಹಿಸಿ ಎಫ್ಎಂಜಿಸಿ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಎಸಿ ಕಚೇರಿ ತಹಸೀಲ್ದಾರ್ ಶಮ್ಶಾಲಂರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕೆಲ ವರ್ಷಗಳಿಂದ ಇ-ಕಾಮರ್ಸ್ ಆನ್ಲೈನ್ ವಹಿವಾಟಿನಿಂದ ಸಣ್ಣ ಮತ್ತು ಮಧ್ಯಮ ವಾಣಿಜ್ಯೋದ್ಯಮಿಗಳ ವಹಿವಾಟನ್ನು ಕಸಿದುಕೊಳ್ಳ ತೊಡಗಿದೆ. ಇದು ಹೀಗೆಯೆ ಮುಂದುವರಿದರೆ ವ್ಯಾಪಾರಿಗಳ ಮತ್ತು ಕೆಲಸಗಾರರ ಕುಟುಂಬಗಳು ಬೀದಿ ಪಾಲಾಗಲಿವೆ. ಸರ್ಕಾರ ಆನ್ಲೈನ್ ವ್ಯವಹಾರ ರದ್ದುಗೊಳಿಸಿ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಉಚಿತ ಆರೋಗ್ಯ ವಿಮೆ ಮತ್ತು ಇತರೆ ಸೌಲಭ್ಯ ಕಲ್ಪಿಸಬೇಕು. ಜಿಎಸ್ಟಿ ಸೇರಿ ಹಲವು ನೋಂದಣಿ ಪಡೆಯುವ ವಾಣಿಜ್ಯೋದ್ಯಮಿಗಳಿಗೆ ಟ್ರೇಡ್ ಲೈಸೆನ್ಸ್ ವಿತರಿಸಿ ವಿನಾಯತಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಹೂಗಾರ, ಗೌರವಾಧ್ಯಕ್ಷ ಅಮರೇಶ ತಾವರಗೇರಾ, ಪ್ರಧಾನ ಕಾರ್ಯದರ್ಶಿ ಮಾಣಿಕಪ್ರಭು ಗುರುಗುಂಟ ಸೇರಿದಂತೆ ಇತರರಿದ್ದರು.