ನವದೆಹಲಿ: ಹಬ್ಬದ ಋತುವಿನ ಮಧ್ಯೆ ಈರುಳ್ಳಿ ಬೆಲೆ ದ್ವಿಗುಣಗೊಂಡಿದೆ. ನವರಾತ್ರಿಯ ನಂತರದ ದಿನಗಳಲ್ಲಿ ಕೆಜಿಗೆ ₹ 25-30 ರಿಂದ ₹ 55-60 ಕ್ಕೆ ಏರಿದೆ. ಮುಂದಿನ ದಿನಗಳಲ್ಲಿ 100 ರೂ. ಗಡಿ ದಾಟುವ ಆತಂಕ ಈಗ ಎದುರಾಗಿದೆ.
ಕಳೆದ ವಾರದವರೆಗೆ ಈರುಳ್ಳಿ ಕೆಜಿಗೆ ₹ 25-30ಕ್ಕೆ ಮಾರಾಟವಾಗುತ್ತಿತ್ತು . ಆದರೆ ಪೂರೈಕೆ ಕ್ಷೀಣಿಸಿದ್ದರಿಂದ ಕಳೆದ ಮೂರು ದಿನಗಳಿಂದ ಕೆ.ಜಿ.ಗೆ ₹ 55-60ಕ್ಕೆ ಏರಿಕೆಯಾಗಿದೆ. ಕೆಲವು ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿ.ಗೆ ₹ 65-70ರವರೆಗೂ ದರ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಬೇಡಿಕೆ ಮತ್ತು ಪೂರೈಕೆ ಕೊರತೆಯಿಂದಾಗಿ ಈರುಳ್ಳಿಯ ಚಿಲ್ಲರೆ ಮತ್ತು ಸಗಟು ಬೆಲೆಯಲ್ಲಿ ಏರಿಕೆಯಾಗಿದೆ. ಮಳೆ ಕೊರತೆಯು ರಾಜ್ಯದಲ್ಲಿ ಈರುಳ್ಳಿ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಬೇಡಿಕೆಯ ಹಠಾತ್ ಹೆಚ್ಚಳದಿಂದಾಗಿ ಇತರ ರಾಜ್ಯಗಳಿಂದ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ ಎಂದು ವರದಿಗಳು ತಿಳಿಸಿವೆ. ಸದ್ಯ ಬೆಂಗಳೂರು ನಗರದಲ್ಲಿ ಈರುಳ್ಳಿ ಕೆಜಿಗೆ 70 ರೂ.ಗೆ ಮಾರಾಟವಾಗುತ್ತಿದ್ದು, ಸದ್ಯದ ಪರಿಸ್ಥಿತಿ ಮುಂದುವರಿದರೆ ಕೆಜಿಗೆ 100 ರೂ. ದಾಟುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಕಳೆದ ಹತ್ತು ದಿನಗಳಿಂದ ಈರುಳ್ಳಿ ಪೂರೈಕೆಯಲ್ಲಿ ದಿಢೀರ್ ಇಳಿಕೆಯಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಎಂಪಿಸಿ) ಅಧಿಕಾರಿಗಳು ಮತ್ತು ಚಿಲ್ಲರೆ ಮಾರಾಟಗಾರರು ತಿಳಿಸಿದ್ದಾರೆ.
ಕರ್ನಾಟಕ ಪ್ರದೇಶದ ಹಲವು ಜಿಲ್ಲೆಗಳಿಗೆ ಮಹಾರಾಷ್ಟ್ರದ ನಾಸಿಕ್ ಮತ್ತು ಸೊಲ್ಲಾಪುರ ಪ್ರದೇಶಗಳಿಂದ ಈರುಳ್ಳಿ ಪೂರೈಕೆಯಾಗುತ್ತದೆ. ಬೇಡಿಕೆಯ ಹಠಾತ್ ಹೆಚ್ಚಳದಿಂದಾಗಿ ಮಹಾರಾಷ್ಟ್ರದಿಂದ ಈರುಳ್ಳಿ ಪೂರೈಕೆಗೆ ತೊಂದರೆಯಾಗಿದೆ. ಕಳೆದ ಎರಡು ವರ್ಷಗಳಿಂದ ಈರುಳ್ಳಿ ಬೆಲೆಯಲ್ಲಿ ಯಾವುದೇ ಏರಿಕೆಯಾಗದ ಕಾರಣ ಈ ವರ್ಷ ಅನೇಕ ಸಾಮಾನ್ಯ ಈರುಳ್ಳಿ ಬೆಳೆಗಾರರು ಇತರ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದ್ದರು ಎಂದು ವರದಿ ತಿಳಿಸಿದೆ. ದೇಶದ ಇತರ ಮಾರುಕಟ್ಟೆಗಳಲ್ಲಿಯೂ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.
ಬೆಲೆಗಳನ್ನು ನಿಯಂತ್ರಣದಲ್ಲಿಡುವ ಪ್ರಯತ್ನದಲ್ಲಿ ಸರ್ಕಾರವು 5.07 ಲಕ್ಷ ಮೆಟ್ರಿಕ್ ಟನ್ ಈರುಳ್ಳಿಯನ್ನು ಸಂಗ್ರಹಿಸಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ. ಇನ್ನೂ 3 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ.