More

    ‘ಗುಣಪತಿ’ಯಾಗಿ ಗಣಪತಿಯನ್ನು ಪೂಜಿಸಬೇಕು; ದೇವರಾಗದೇ ದೇವರನ್ನು ಪೂಜಿಸಬಾರದು…

    'ಗುಣಪತಿ'ಯಾಗಿ ಗಣಪತಿಯನ್ನು ಪೂಜಿಸಬೇಕು; ದೇವರಾಗದೇ ದೇವರನ್ನು ಪೂಜಿಸಬಾರದು…

    ಶ್ರೀ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು

    ವಿಘ್ನನಿವಾರಕನಾಗಿರುವುದರಿಂದ ಗಣಪತಿಯ ಒಲುಮೆ ಪಡೆಯಲು ಎಲ್ಲರೂ ಹಂಬಲಿಸುತ್ತಾರೆ. ಅದಕ್ಕಾಗಿ ಪ್ರತಿಯೊಂದು ಧಾರ್ಮಿಕ ಕಾರ್ಯದ ಪ್ರಾರಂಭದಲ್ಲಿ ಮೊದಲು ಗಣಪತಿಯ ಪೂಜೆಯನ್ನೆ ಮಾಡುತ್ತಾರೆ. ಅದರಲ್ಲೂ ವಿಶೇಷವಾಗಿ ಭಾದ್ರಪದ ಚೌತಿ ಬಂದರೆ ಸಾಕು ಎಲ್ಲರೂ ಎಲ್ಲೆಡೆಯಲ್ಲೂ ತಮ್ಮ ತಮ್ಮ ಶಕ್ತಿ ಮತ್ತು ಭಕ್ತಿಗೆ ಅನುಸಾರವಾಗಿ ಅವನ ಪ್ರತಿಷ್ಠಾಪನೆ, ಪೂಜೆ, ಉತ್ಸವಾದಿಗಳನ್ನು ನೆರವೇರಿಸುತ್ತಾರೆ. “ನಾರುದ್ರೋ ರುದ್ರಮರ್ಚಯೇತ್” ದೇವರಾಗದೇ ದೇವರನ್ನು ಪೂಜಿಸಬಾರದು ಎಂಬ ಉಕ್ತಿಯಂತೆ ಗಣಪತಿಯನ್ನು ಪೂಜೆ ಮಾಡಬೇಕಾದರೆ ನಾವು ಮೊದಲು ಗಣಪತಿಯಾಗಬೇಕು. ಗಣಪತಿಯಾಗುವುದೆಂದರೆ ಅವನ ಆಕಾರದಂತೆ ನಮ್ಮ ಆಕಾರವನ್ನು ಮಾಡಿಕೊಳ್ಳುವುದಲ್ಲ, ಬದಲಾಗಿ ಅವನ ಆಕಾರದಲ್ಲಿನ ಅವಯವಗಳು ಸಂಕೇತಿಸುವ ಸದ್ಗುಣಗಳನ್ನು ಅಳವಡಿಸಿಕೊಂಡು ನಾವು ಗುಣಪತಿಯಾಗಬೇಕು ಎಂದರ್ಥ.

    ಗಣಪತಿಯು ಮೂಷಕ ವಾಹನ. ಇಲಿಯು ಮನಸ್ಸಿನ ಸಂಕೇತ. ಇಲಿಯು ಕಂಡದ್ದನ್ನೆಲ್ಲ ತಿಂದುಬಿಡುವ ಸ್ವಭಾವ ಹೊಂದಿರುವಂತೆ ನಮ್ಮ ಮನಸ್ಸು ಕೂಡ ಪಂಚೇಂದ್ರಿಯಗಳ ಮೂಲಕ ಕಾಣುವ ಎಲ್ಲ ವಿಷಯಗಳನ್ನು ಆಸ್ವಾದಿಸಲು ಹಾತೊರೆಯುತ್ತದೆ. ಗಣಪತಿಯು ಇಲಿಯನ್ನು ವಾಹನ ಮಾಡಿಕೊಂಡು ತನ್ನ ನಿಯಂತ್ರಣದಲ್ಲಿರಿಸಿಕೊಂಡಂತೆ ನಾವು ನಮ್ಮ ಮನಸ್ಸನ್ನು ನಮ್ಮ ಸ್ವಾಧೀನದಲ್ಲಿ ಇರಿಸಿಕೊಳ್ಳಬೇಕು.

    ಗಣಪತಿಯು ಲಂಬೋದರ. ಅವನ ಹೊಟ್ಟೆ ವಿಶಾಲವಾಗಿದೆ. ವಿಶಾಲ ಉದರವು ಉದಾರತೆಯ ಸಂಕೇತ. ಅಂತೆಯೇ ಯಾರಾದರೂ ತಪ್ಪು ಮಾಡಿದರೆ ” ಎನೋ ತಿಳಿಯದೆ ತಪ್ಪು ಆಗಿದೆ, ನೀವೆ ದೊಡ್ಡ ಮನಸ್ಸು ಮಾಡಿ ಹೊಟ್ಟಿಯಲ್ಲಿ ಹಾಕಿಕೊಂಡು ಮನ್ನಿಸಿ” ಎಂದು ವಿನಂತಿಸುತ್ತಾರೆ. ಇತರರ ತಪ್ಪುಗಳನ್ನು ಕ್ಷಮಿಸುವ ಉದಾರ ಗುಣವನ್ನು ಅಳವಡಿಸಿಕೊಂಡಾಗ ನಾವು ಗಣಪತಿಯ ಉದರ ಹೊಂದಿದಂತೆ.

    ಗಣಪತಿಯ ಹೊಟ್ಟೆಯ ಒಳಗೆ ಮೋದಕಗಳಿದ್ದರೆ, ಮೇಲೆ ಹಾವು ಸುತ್ತಿಕೊಂಡಿದೆ. ಇದು ಸಿಹಿಕಹಿಗಳ ದ್ವಂದ್ವದ ಪ್ರತೀಕ. ಹೊರಗಡೆ ಎಷ್ಟೇ ವಿಷಮವಾದ ವಿಷಮಯ ವಾತಾವರಣವಿದ್ದರೂ ನಮ್ಮೊಳಗಿನ ಮನಸ್ಸನ್ನು ಮಾತ್ರ ಯಾವಾಗಲೂ ಮಧುರವಾಗಿರಿಸಿಕೊಂಡಿರಬೇಕು ಎಂಬುದರ ಸಂಕೇತ.

    ಗಣಪತಿಗೆ ನಾಲ್ಕು ಭುಜಗಳು. ಇವು ಧರ್ಮ ಅರ್ಥ ಕಾಮ ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳ ಸಂಪಾದನೆಯ ಸಂಕೇತಗಳು. ನಿರಂತರವಾದ ನಿಷ್ಠೆಯ ಸಾಧನೆಯ ಮೂಲಕ ನಾಲ್ಕು ಪುರುಷಾರ್ಥಗಳನ್ನು ಸಂಪಾದಿಸಿಕೊಂಡಾಗ ನಾವು ಗಣಪತಿಯಂತೆ ನಾಲ್ಕು ಭುಜಗಳುಳ್ಳವರಗುತ್ತೇವೆ.

    ಗಣಪತಿಯ ಕಣ್ಣುಗಳು ಅತ್ಯಂತ ಚಿಕ್ಕವು. ಇದು ಸೂಕ್ಷ್ಮ ದೃಷ್ಟಿಯ ಸಂಕೇತ. “ಅಣೋರಣೀಯಾನ್ ಮಹತೋ ಮಹೀಯಾನ್” ಎಂಬ ವೇದೋಕ್ತಿಯಂತೆ ಸೂಕ್ಷ್ಮಕ್ಕಿಂತ‌  ಸೂಕ್ಷ್ಮನಾದ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ ಗಣಪತಿಯಂತೆ ನಮ್ಮ ದೃಷ್ಟಿಯನ್ನು ಮತ್ತು ದೃಷ್ಟಿಕೋನವನ್ನು ಸೂಕ್ಷ್ಮಗೊಳಿಸಿಕೊಳ್ಳಬೇಕು.

    ಗಣಪತಿಯ ಕಿವಿಗಳು ಕೇರುವ ಮರದಂತಿವೆ. ಕಾಳು-ಕಡಿಗಳನ್ನು, ದವಸ-ಧಾನ್ಯಾದಿಗಳನ್ನು ಸ್ವಚ್ಛಗೊಳಿಸಲು ಚಾಣಿಗೆ ಮತ್ತು ಕೇರುವ ಮರ ಈ ಎರಡು ವಸ್ತುಗಳನ್ನು ಉಪಯೋಗಿಸುತ್ತಾರೆ. ಇವೆರಡೂ ಕಾಳುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದರೂ, ಇವುಗಳಲ್ಲಿ ಸೂಕ್ಷ್ಮ ವ್ಯತ್ಯಾಸವಿದೆ. ಚಾಣಿಗೆಯು ಬೇಡವಾದ ಕಸಕಡ್ಡಿಗಳನ್ನು ತನ್ನೊಳಗೆ ಇರಿಸಿಕೊಂಡು ಉತ್ತಮವಾದ ಕಾಳುಗಳನ್ನು ಕೆಳಗೆ ಬಿಡುತ್ತದೆ. ಆದರೆ ಕೇರುವ ಮರವು ಉಪಯುಕ್ತವಾದ ಕಾಳುಗಳನ್ನು ತನ್ನೊಳಗೆ ಇರಿಸಿಕೊಂಡು ಬೇಡವಾದ ಕಸಕಡ್ಡಿಗಳನ್ನು ಹೊರಗೆ ಹಾಕುತ್ತದೆ. ಇದರಂತೆ ಉತ್ತಮ ಮಾತುಗಳನ್ನು ಕಿವಿಯಲ್ಲಿ ಇರಿಸಿಕೊಂಡು ನಿಂದೆ, ಚಾಡಿ ಮುಂತಾದ ಕೆಟ್ಟ ಮಾತುಗಳನ್ನು ಹೊರಹಾಕುವ ಮೂಲಕ ನಮ್ಮ ಕಿವಿಯನ್ನು ಗಣಪತಿಯ ಕಿವಿಯ ಹಾಗೆ ಅಂದರೆ ಮರದಂತೆ ಮಾಡಿಕೊಳ್ಳಬೇಕು.

    ಹೀಗೆ ಮನೋನಿಯಂತ್ರಣ, ಉದಾರತೆ, ಕ್ಷಮಾಗುಣ, ಮನದ ಮಧರತೆ, ಪುರುಷಾರ್ಥಗಳ ಸಂಪಾದನೆ, ಸೂಕ್ಷ್ಮದೃಷ್ಟಿ, ಉತ್ತಮ ಮಾತುಗಳ ಆಯ್ಕೆ ಮುಂತಾದ ಶ್ರೇಷ್ಠ ಗುಣಗಳನ್ನು ಅಳವಡಿಸಿಕೊಂಡು ಗುಣಪತಿಯಾಗಿ ಗಣಪತಿಯನ್ನು ಪೂಜಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts