ನವದೆಹಲಿ: ದೆಹಲಿ ನಿರ್ಭಯಾ ಪ್ರಕರಣದ ಆರೋಪದಡಿಯಲ್ಲಿ ತಿಹಾರ್ ಜೈಲಿನಲ್ಲಿರುವ ಅಪರಾಧಿಗಳ ಪೈಕಿ ಒಬ್ಬಾತ ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡಿರುವ ಘಟನೆ ನಡೆದಿದೆ.
ಮಾರ್ಚ್ 3ರಂದು ಗಲ್ಲಿಗೆ ಏರಲಿರುವ ಅಪರಾಧಿ ವಿನಯ್ ಶರ್ಮಾ ಫೆ.16ರಂದು ತನ್ನ ತಲೆಯನ್ನು ಜೈಲಿನ ಗೋಡೆಗೆ ಚಚ್ಚಿಕೊಂಡಿದ್ದಾನೆ ಎನ್ನುವುದು ವರದಿಯಾಗಿದೆ. ಆತನ ಮಾನಸಿಕ ಸ್ಥಿತಿ ಸರಿ ಇಲ್ಲದ ಕಾರಣ ಆತ ಈ ರೀತಿಯಲ್ಲಿ ನಡೆದುಕೊಂಡಿದ್ದಾನೆ ಎನ್ನಲಾಗಿದೆ, ಅಪರಾಧಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ವಿನಯ್ ಶರ್ಮಾ ತನ್ನ ತಪ್ಪನ್ನು ಮನ್ನಿಸುವಂತೆ ರಾಷ್ಟ್ರಪತಿಗಳಿಗೆ ಕ್ಷಮಾದಾನ ಪತ್ರವನ್ನು ಬರೆದಿದ್ದ. ಆದರೆ ರಾಷ್ಟ್ರಪತಿಗಳು ಆ ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆ ಆತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ. ಸುಪ್ರೀಂ ಕೋರ್ಟ್ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮಾರ್ಚ್ 3ರಂದು ಬೆಳಗ್ಗೆ 6 ಗಂಟೆಗೆ ಗಲ್ಲಿಗೇರಿಸುವಂತೆ ಆದೇಶ ನೀಡಿದೆ.
ಅಪರಾಧಿ ವಿನಯ್ ಶರ್ಮಾ ಮಾನಸಿಕ ಸ್ಥಿತಿ ಸರಿ ಇಲ್ಲ ಎಂಬ ಕಾರಣಕ್ಕೆ ಆತನ ಪರ ವಕೀಲ ಆತನಿಗೆ ಗಲ್ಲು ಶಿಕ್ಷೆ ವಿಧಿಸಬಾರದು ಎಂದು ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದ. ಆದರೆ ನ್ಯಾಯಾಲಯವು ಆತನಿಗೆ ಚಿಕಿತ್ಸೆ ನೀಡಲು ಹೇಳಿ, ಗಲ್ಲು ಶಿಕ್ಷೆ ತಡೆಯ ವಿಚಾರವನ್ನು ಕೈ ಬಿಟ್ಟಿತ್ತು. (ಏಜೆನ್ಸೀಸ್)