ಬೆಂಗಳೂರು: ರಾಜ್ಯದಲ್ಲಿಂದು ಪದವಿಪೂರ್ವ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಲಕ್ಷಾಂತರ ಮಕ್ಕಳು ಪಾಸಾದ ಸಂಭ್ರಮದಲ್ಲಿದ್ದರೆ, ಅತ್ತ ನಿರ್ದೇಶಕ ಯೋಗರಾಜ್ ಭಟ್ ಅವರ ‘ಪದವಿಪೂರ್ವ’ ತಂಡವೂ ಸಂತೋಷದಲ್ಲಿದೆ. ಹಾಗಂತ ಅವರಿಗಿನ್ನೂ ‘ಪದವಿಪೂರ್ವ’ ಫಲಿತಾಂಶ ಬಂದಿಲ್ಲ, ಅದಾಗ್ಯೂ ತಂಡ ಸಂತೋಷದಲ್ಲಿದೆ.
ಏಕೆಂದರೆ, ಯೋಗರಾಜ್ ಭಟ್ ಸಿನಿಮಾಸ್ ಹಾಗೂ ರವಿ ಶಾಮನೂರ್ ಫಿಲ್ಮ್ಸ್ ಜಂಟಿ ನಿರ್ಮಾಣದ ‘ಪದವಿಪೂರ್ವ’ ಚಿತ್ರ ಬಿಡುಗಡೆಗೂ ಮುನ್ನವೇ ಇದೇ ನಿರ್ಮಾಪಕರು ಇನ್ನೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಈ ತಂಡ ಮತ್ತೊಂದು ಸಿನಿಮಾಗೆ ಜತೆಯಾಗಿ ಕೆಲಸ ಮಾಡುವ ಸಂತಸದಲ್ಲಿದೆ.
ಭಟ್ಟರ ತಂಡದ ಪ್ರಮುಖ ಸದಸ್ಯ ಹರಿಪ್ರಸಾದ್ ಜಯಣ್ಣ ನಿರ್ದೇಶನದ ‘ಪದವಿಪೂರ್ವ’ ಚಿತ್ರ ಇನ್ನೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇರುವಾಗಲೇ ಇದೇ ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕರ ಕಾಂಬಿನೇಷನ್ನಲ್ಲಿ ಮತ್ತೊಂದು ಚಿತ್ರ ಹೊರಬರುವುದು ಖಚಿತವಾಗಿದೆ.
ಅಕ್ಟೋಬರ್ನಲ್ಲಿ ಸೆಟ್ಟೇರಲಿರುವ ಈ ಹೊಸ ಚಿತ್ರಕ್ಕೆ ‘ಪದವಿಪೂರ್ವ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಯುವ ನಟ ಪೃಥ್ವಿ ಶಾಮನೂರ್ ಅವರೇ ನಾಯಕನಾಗಿ ಮುಂದುವರಿಯಲಿದ್ದಾರೆ. ಪೃಥ್ವಿ ಈಗಾಗಲೇ ಯೋಗರಾಜ್ ಭಟ್ಟರ ಇನ್ನೊಂದು ಹೊಸ ಸಿನಿಮಾ ‘ಗರಡಿ’ಯಲ್ಲೂ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಒಟ್ಟಿನಲ್ಲಿ ‘ಪದವಿಪೂರ್ವ’ ಚಿತ್ರದ ನಿರ್ಮಾಪಕ, ನಿರ್ದೇಶಕ, ನಾಯಕರ ಕಾಂಬಿನೇಷನ್ನಲ್ಲಿ ಇನ್ನೊಂದು ಸಿನಿಮಾ ಬರಲಿದೆ.
ಈ ಚಿತ್ರಕ್ಕಾಗಿ ಹೊಸ ಪ್ರತಿಭೆಗಳ ಅಗತ್ಯವಿದ್ದು, ಆಡಿಷನ್ ಮೂಲಕ ಅಪ್ಪಟ ದೇಸಿ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಇನ್ನುಳಿದಂತೆ ‘ಪದವಿಪೂರ್ವ’ ಚಿತ್ರಕ್ಕಾಗಿ ದುಡಿದಿದ್ದ ಉತ್ಸಾಹಿ ಯುವ ತಂತ್ರಜ್ಞರ ತಂಡದ ಬಹುತೇಕ ಸದಸ್ಯರೇ ಸೆಟ್ಟೇರಲಿರುವ ಈ ಹೊಸ ಸಿನಿಮಾದಲ್ಲೂ ತಮ್ಮ ಕೈಚಳಕ ತೋರಲಿದ್ದಾರೆ ಎಂದು ನಿರ್ದೇಶಕ ಹರಿಪ್ರಸಾದ್ ಜಯಣ್ಣ ತಿಳಿಸಿದ್ದಾರೆ.
ಅಮ್ಮನಾದ ನಟಿ ಪ್ರಣೀತಾ; ಮುನ್ನಾಭಾಯಿ ಎಂಬಿಬಿಎಸ್ ಚಿತ್ರದ ದೃಶ್ಯ ನೆನಪಿಸಿಕೊಂಡಿದ್ದೇಕೆ?