ಕಲಬುರಗಿ: ರಾಜ್ಯದಲ್ಲಿ ವರ್ಷಾರಂಭದ ಮೊದಲ ದಿನವೇ ಅಪಘಾತದ ಮೇಲೆ ಅಪಘಾತ ಸಂಭವಿಸಿದ್ದು, ಇದೀಗ ಮೂರನೇ ಭೀಕರ ಅಪಘಾತವಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಂದೇ ದಿನದಲ್ಲಿ ಮೂರು ಭೀಕರ ಆ್ಯಕ್ಸಿಡೆಂಟ್ ಸಂಭವಿಸಿದ್ದು, ಒಟ್ಟಿಗೆ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕಿನ ಭಂಕೂರ್ ಗ್ರಾಮದ ಬಳಿ ಈ ಅಪಘಾತವಾಗಿದ್ದು, ಬೈಕ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿದೆ. ಇದರಲ್ಲಿ ಬೈಕ್ ಸವಾರರಾದ ನಜೀರ್ ಸಾಬ್ (28) ಹಾಗೂ ಟೋಪಸಿಂಗ್ (26) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಬೈಕ್ ಸವಾರರು ಕಲಬುರಗಿಯಿಂದ ಶಹಬಾದ್ ಪಟ್ಟಣಕ್ಕೆ ತೆರಳುತ್ತಿದ್ದಾಗ ಅದೇ ದಾರಿಯಲ್ಲಿ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಸ್ಥಳಕ್ಕೆ ಶಹಬಾದ್ ಪೋಲಿಸರ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲಿಸಿದ್ದಾರೆ. ಲಾರಿ ಚಾಲಕನ ಪತ್ತೆಗೆ ಕ್ರಮಕೈಗೊಂಡಿದ್ದಾರೆ.