ಮೂಡಿಗೆರೆ: ತಾಲೂಕಿನಲ್ಲಿ ಈವರೆಗೂ ಕರೊನಾ ವೈರಸ್ ಕಂಡುಬಂದಿಲ್ಲ. ತಾಲೂಕಿನ ಎಲ್ಲ ಅಧಿಕಾರಿಗಳು ಜನರಿಗೆ ಅರಿವು ಮೂಡಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ತೋರಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಅಧ್ಯಕ್ಷ ಕೆ.ಸಿ.ರತನ್ ಎಚ್ಚರಿಸಿದರು.
ಕರೊನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ತಾಪಂ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪಿಡಿಒಗಳ ಸಭೆಯಲ್ಲಿ ಮಾತನಾಡಿದರು.
ಕರೊನಾ ನಿಯಂತ್ರಣ ಕೇವಲ ಆರೋಗ್ಯ ಇಲಾಖೆ ಕೆಲಸವಲ್ಲ. ಎಲ್ಲ ಇಲಾಖೆ ಅಧಿಕಾರಿಗಳು ಹಳ್ಳಿಗಳಲ್ಲಿ ಪ್ರಚಾರ ಮಾಡಬೇಕು. ಗ್ರಾಪಂ ವ್ಯಾಪ್ತಿಯ ಹೋಂ ಸ್ಟೇ, ರೆಸಾರ್ಟ್, ಹೋಟೆಲ್, ದೇವಸ್ಥಾನ, ಮಸೀದಿ, ಚರ್ಚ್ಗಳನ್ನು ಸಂಪೂರ್ಣ ಬಂದ್ ಮಾಡಿಸಬೇಕು. ಜಾತ್ರೆ, ಸಂತೆ, ಸಭೆ ಸಮಾರಂಭ ನಡೆಸದಂತೆ ನೋಡಿಕೊಳ್ಳಬೇಕು. ಮದುವೆ ಕಾರ್ಯದಲ್ಲಿ 20ಕ್ಕೂ ಹೆಚ್ಚು ಜನ ಸೇರದಂತೆ ಕ್ರಮ ಕೈಗೊಳ್ಳಬೇಕು. ಜನರು ಸ್ಪಂದಿಸದ್ದರೆ ಕೇಸ್ ಹಾಕಬೇಕು ಎಂದು ತಿಳಿಸಿದರು.
ಕೊಟ್ಟಿಗೆಹಾರ ಮತ್ತು ಕಳಸ ಸೂಕ್ಷ್ಮ ಪ್ರದೇಶವಾದ್ದರಿಂದ ತಪಾಸಣೆ ಆಗಲೇಬೇಕು. ಪಿಡಿಒ, ನೋಡಲ್ ಅಧಿಕಾರಿಗಳ ವಾಟ್ಸ್ಆಪ್ ಗ್ರೂಪ್ ಮಾಡಿಕೊಂಡು ಸಂಪರ್ಕದಲ್ಲಿರಬೇಕು. ಟೈಪಿಂಗ್ ಮಾಡುವುದು ಕಷ್ಟವಾದರೆ ವಾಯ್್ಸ ಮೆಸೇಜ್ ಮಾಡಿ. ನಿಮ್ಮ ನಂಬರ್ಗಳನ್ನು ಸಾರ್ವಜನಿಕರಿಗೆ ಕೊಡಿ. ಮಾಹಿತಿ ಸಿಕ್ಕ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಎಲ್ಲ ಪಿಡಿಒಗಳು ಕನಿಷ್ಠ ಒಂದು ತಿಂಗಳ ಮಟ್ಟಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಮಾಡಿಕೊಳ್ಳಬೇಕು. ಕರೊನಾ ವೈರಸ್ ಹರಡದಂತೆ ತಡೆಯುವ ಕೆಲಸ ಮಾಡಬೇಕು ಎಂದು ಸೂಚಿಸಿದರು.