ಭುವನೇಶ್ವರ್: ರಾಜ್ಯದಲ್ಲಿ 2019-20ನೇ ಆರ್ಥಿಕ ವರ್ಷದಲ್ಲಿ ಒಡಿಶಾ ರಾಜ್ಯಸರ್ಕಾರ ಬಜೆಟ್ನ್ನು ಭಾಗಶಃ ಕಾಗದ ರಹಿತಗೊಳಿಸುವ ಮೂಲಕ 700 ದೊಡ್ಡ ಮರಗಳನ್ನು ಉಳಿಸಿದೆ ಎಂದು ರಾಜ್ಯಪಾಲ ಗಣೇಶಿ ಲಾಲ್ ತಿಳಿಸಿದ್ದಾರೆ.
ಶುಕ್ರವಾರ ಬಜೆಟ್ ಅಧಿವೇಶನ ಶುರುವಾಗುವುದಕ್ಕೂ ಮೊದಲು ಮಾತನಾಡಿದ ಅವರು, ಕಳೆದ ಬಾರಿ ಬಜೆಟ್ನಲ್ಲಿ ಡಿಜಿಟಲ್ ವಿಧಾನಗಳನ್ನು ಬಳಸಿಕೊಂಡಿದ್ದರಿಂದ ಸುಮಾರು 57 ಲಕ್ಷ ಪುಟಗಳ ಮುದ್ರಣ ಮಾಡುವುದು ಕಡಿಮೆಯಾಗಿತ್ತು. ಇದರಿಂದಾಗಿ 700 ದೊಡ್ಡ ದೊಡ್ಡ ಮರಗಳು ಉಳಿದಿವೆ ಎಂದು ಹೇಳಿದರು.
ಭವಿಷ್ಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಕಾಗದ ರಹಿತ ಬಜೆಟ್ ತಯಾರಿ ಮಾಡುವ, ಪೂರ್ಣವಾಗಿ ಡಿಜಿಟಲ್ಗೆ ಪರಿವರ್ತನೆಯಾಗುವ ಉದ್ದೇಶ ಹೊಂದಿದೆ. ಇದರಿಂದ ತುಂಬ ಅನುಕೂಲವಾಗಲಿದೆ ಎಂದು ಗಣೇಶಿ ಲಾಲ್ ತಿಳಿಸಿದರು.
ಅಷ್ಟೇ ಅಲ್ಲ ರಾಜ್ಯ ಸರ್ಕಾರದ ಉದ್ಯೋಗಿಗಳಿಗೆ ಒಂದೇ ಪುಟದ ಸ್ಯಾಲರಿ ಬಿಲ್ ಹಾಗೂ ಪಿಂಚಣಿ ಪೇಪರ್ಗಳನ್ನು ಪರಿಚಯಿಸಲಾಗಿದೆ. ಇವುಗಳನ್ನು ಸಂಯೋಜಿತ ಹಣಕಾಸು ನಿರ್ವಹಣಾ ವ್ಯವಸ್ಥೆ (Integrated Financial Management System (IFMS))ಯ ಮೂಲಕ ವಿದ್ಯುನ್ಮಾನವಾಗಿ ಪರಿಷ್ಕರಿಸಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರದ ಎಲ್ಲ ಇಲಾಖೆಗಳು, ಸಚಿವಾಲಯಗಳಲ್ಲಿ ಒಡಿಶಾ ಸೆಕ್ರೆಟರಿಯಟ್ ವರ್ಕ್ಫ್ಲೋ ಆಟೊಮೇಷನ್ ಸಿಸ್ಟಮ್ನ್ನು(ಒಎಸ್ಡಬ್ಲ್ಯೂಎಎಸ್) ರಾಜ್ಯ ಸರ್ಕಾರ ಜಾರಿ ಮಾಡಿದೆ.
ಈ ಒಎಸ್ಡಬ್ಲ್ಯೂಎಎಸ್ನಿಂದಾಗಿ ಕಾಗದ ಬಳಕೆ ಕಡಿಮೆಯಾಗಿದೆ. ಇದರಿಂದ ಹೆಚ್ಚಿನ ಡಾಟಾಗಳ ಸಂಗ್ರಹ, ನಿರ್ವಹಣೆ, ಮರುಬಳಕೆ ಸುಲಭವಾಗಿ ಆಗುತ್ತಿದೆ. ಬೇಕಾದ ದಾಖಲೆಗಳನ್ನು ವೇಗವಾಗಿ ಹುಡುಕಬಹುದು. ಆಗಿಂದಾಗೆ ಅನುಮೋದನೆಗಳನ್ನು ಪಡೆಯಬಹುದು, ಇದರಲ್ಲಿ ತುರ್ತು ಆಗಬೇಕಾದ ಕೆಲಸಗಳ ದಾಖಲೆಗಳ ಬಗ್ಗೆ ಎಸ್ಎಂಎಸ್ ಅಲರ್ಟ್ ಕೂಡ ಬರುತ್ತದೆ. ಈ ಎಲ್ಲ ಕೆಲಸಗಳನ್ನು ಕಡಿಮೆ ಪ್ರಮಾಣದ ಕಾಗದ ಬಳಸಿ ಮಾಡಬಹುದು ಎಂದು ಹೇಳಿದ್ದರು.(ಪಿಟಿಐ)