ನ್ಯಾಮತಿ: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಜನರಲ್ಲಿ ಜಾಗೃತಿ ಮೂಡಿಸುವುದೊಂದೇ ಪರಿಹಾರ ಎಂದು ಹೊನ್ನಾಳಿ ಜೆಎಂಎಫ್ಸಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಚ್. ದೇವದಾಸ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಆಡಳಿತ, ತಾಪಂ, ಪಪಂ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಬಾಲ ಕಾರ್ಮಿಕ ಪದ್ಧತಿ ಅಳಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಿ. ಶಿಕ್ಷಣವಂತರನ್ನಾಗಿ ಮಾಡುವ ಕುರಿತು ಎಲ್ಲ ಪಾಲಕರು ತಿಳಿದುಕೊಳ್ಳಬೇಕು. ದುಡಿಮೆ ಬೇಡ, ಶಿಕ್ಷಣ ಬೇಕು ಎಂಬ ಘೋಷವಾಕ್ಯದ ಕುರಿತು ಎಲ್ಲರೂ ಅರಿಯಬೇಕು. ಬಾಲ ಕಾರ್ಮಿಕರನ್ನು ಕೆಲಸಕ್ಕೆ ಹಚ್ಚುವುದು ಮತ್ತು ಅವರಿಂದ ದುಡಿಸಿಕೊಳ್ಳುವುದು ಅಪರಾಧ. ಉದ್ಯಮಿದಾರರು ಬಾಲ ಕಾರ್ಮಿಕರನ್ನು ತಮ್ಮ ಕೆಲಸದ ಸ್ಥಳಗಳಲ್ಲಿ ನಿಯೋಜನೆ ಮಾಡದೆ ಕಾನೂನಿನ ಅರಿವಿನ ಕುರಿತು ತಿಳಿದುಕೊಳ್ಳುವುದು ಮುಖ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿಇಒ ಎಸ್.ಸಿ. ನಂಜರಾಜ್ ಮಾತನಾಡಿ, ಪಾಲಕರು ಮಕ್ಕಳನ್ನು ದುಡಿಮೆಗೆ ಕಳುಹಿಸದೆ, ಶಿಕ್ಷಣದ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ತಹಸೀಲ್ದಾರ್ ಆರ್.ವಿ. ಕಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು. ಪಪಂ ಮುಖ್ಯಾಧಿಕಾರಿ ಪಿ. ಗಣೇಶರಾವ್, ನ್ಯಾಮತಿ ಠಾಣೆಯ ಪಿಎಸ್ಐ ಎಸ್. ರಮೇಶ್, ಹೊನ್ನಾಳಿ ವಕೀಲರ ಸಂಘದ ಅಧ್ಯಕ್ಷ ಎಚ್. ಉಮಾಕಾಂತ್ ಜೋಯಿಸ್, ವಕೀಲ ಎಚ್.ಕೆ. ಕರುಣಾಕರ್ ಮಾತನಾಡಿದರು.
ಹೊನ್ನಾಳಿ ಸಹಾಯಕ ಸರ್ಕಾರಿ ಅಭಿಯಂತರ ವಾಣಿ, ಹೊನ್ನಾಳಿ ವೃತ್ತದ ಕಾರ್ಮಿಕ ನಿರೀಕ್ಷಕ ರಾಜಶೇಖರ್ ಹಿರೇಮಠ, ಶಿಕ್ಷಣ ಇಲಾಖೆಯ ಮುದ್ದನಗೌಡ, ವಕೀಲರ ಸಂಘದ ಉಪಾಧ್ಯಕ್ಷ ಬಿ. ಉಮೇಶ್, ಹೊನ್ನಾಳಿ ವೃತ್ತದ ಕಾರ್ಮಿಕ ನಿರೀಕ್ಷಕ ಕಚೇರಿಯ ಪ್ರದೀಪ್ ನಾಯ್ಕ , ಎಂ. ನಾಗರಾಜ, ಉಪಪ್ರಾಂಶುಪಾಲ ಎಸ್.ಆರ್. ಗಿರಿಜಮ್ಮ , ಶಿಕ್ಷಕರಾದ ಶಶಿರೇಖಾ, ರೂಪಾ, ಪೂರ್ಣಿಮಾ, ವಕೀಲರಾದ ಭುವನೇಶ್ವರ್ ಸ್ವಾಮಿ, ಸುನಿಲ್ಕುಮಾರ್ ಇತರರು ಇದ್ದರು.