ಗಂಗಾವತಿ: ಮಕ್ಕಳಿಗೆ ಪೌಷ್ಟಿಕ ಆಹಾರ ಸೇವನೆಯ ಬಗ್ಗೆ ಶಿಕ್ಷಕರು ಜಾಗೃತಿ ಮೂಡಿಸಬೇಕಿದ್ದು, ಆರೋಗ್ಯ ಭಾಗ್ಯದ ಸೂತ್ರಗಳನ್ನು ತಿಳಿಸಿಕೊಡುವಂತೆ ಬಿಇಒ ಸೋಮಶೇಖರಗೌಡ ಹೇಳಿದರು.
ನಗರದ ಹೊಸಳ್ಳಿ ರಸ್ತೆಯ ಆರೋನ್ ಮಿರಜಕರ್ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಆರೋಗ್ಯ ಜಾಗೃತಿ ವಸ್ತು ಪ್ರದರ್ಶನ ಸ್ಪಾರ್ಕ್-2 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳನ್ನು ಕೇವಲ ಪಠ್ಯಪುಸ್ತಕಕ್ಕೆ ಸೀಮಿತಗೊಳಿಸದೆ ಆರೋಗ್ಯ ಪೂರಕ ಚಟುವಟಿಕೆಗಳತ್ತ ಶಿಕ್ಷಕರು ತರಬೇತಿ ನೀಡಬೇಕಿದೆ. ಪೌಷ್ಟಿಕ ಆಹಾರ ಸೇವನೆ ಮತ್ತು ಕಸರತ್ತುಗಳ ಬಗ್ಗೆ ತಿಳಿವಳಿಕೆ ನೀಡಬೇಕಿದೆ. ಆಹಾರ ಪದ್ಧತಿಯ ಆರೋಗ್ಯ ಸೂತ್ರಗಳನ್ನು ತಿಳಿಸಿಕೊಡಬೇಕಿದ್ದು, ಸದೃಢ ಯುವಕರಿಂದ ಬಲಿಷ್ಟ ದೇಶ ನಿರ್ಮಾಣ ಸಾಧ್ಯ ಎಂದರು.
ಮಧುಮೇಹ ತಜ್ಞ ವೈದ್ಯ ಡಾ.ಸತೀಶ ರಾಯ್ಕರ್ ಮಾತನಾಡಿ, ಪೌಷ್ಟಿಕತೆ ಪ್ರಮಾಣದ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಮಕ್ಕಳಿಗೆ ಆಹಾರ ಸೇವನೆಯ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಿರಿಧಾನ್ಯ, ವಿವಿಧ ಬಗೆಯ ಕಾಳುಗಳು, ತರಕಾರಿ, ಹಣ್ಣು, ಮೀನು, ಮೊಟ್ಟೆ, ಮಾಂಸ ಸೇರಿ ಪೌಷ್ಟಿಕ ಆಹಾರದ ಮಾದರಿಗಳನ್ನು ಪ್ರದರ್ಶಿಸಲಾಗಿದ್ದು, ಹಸಿರೀಕರಣದ ಮಹತ್ವ ನೀಡಲಾಯಿತು. ಸರ್ ಎಂ.ವಿ. ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಜಗನ್ನಾಥ ಆಲ್ಲಂಪಲ್ಲಿ, ಸಂಸ್ಥೆ ಅಧ್ಯಕ್ಷೆ ಚಿನ್ನಮ್ಮ ಮಿರಜಕರ್, ಕಾರ್ಯದರ್ಶಿ ರುಬೀನ್ ಮಿರಜಕರ್, ಆಡಳಿತಾಧಿಕಾರಿ ಚಂದ್ರಕಾಂತರಾವ್, ಮುಖ್ಯಶಿಕ್ಷಕ ಜೋಸ್ಲಿನ್, ನರ್ಸಿಂಗ್ ಕಾಲೇಜು ಪ್ರಾಚಾರ್ಯ ಬಸವರಾಜ ಮೇಟಿ ಇತರರಿದ್ದರು.