ಮೊಳಕಾಲ್ಮೂರು: ಮಕ್ಕಳ ಆರೋಗ್ಯ ರಕ್ಷಣೆಗೆ ಪೋಷಣ ಅಭಿಯಾನ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ಮುಖ್ಯಶಿಕ್ಷಕ ಜೆ.ರಾಮಯ್ಯ ಹೇಳಿದರು.
ತಾಲೂಕಿನ ಜೆಬಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳ ಪೌಷ್ಟಿಕ ಆಹಾರ ಪದ್ಧತಿಗೆ ಸರ್ಕಾರ ಒತ್ತು ನೀಡಿದ್ದು, ಅಭಿಯಾನ ಆರಂಭಿಸಿದೆ. ಗ್ರಾಮೀಣ ಬಡ ಮಕ್ಕಳು ಹಾಗೂ ಗರ್ಭಿಣಿಯರು, ಬಾಣಂತಿಯರು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಸುಧಾರಣೆ ಕಾಣಲು ಅನುಕೂಲವಾಗಿದೆ ಎಂದರು.
ಪ್ರಾಥಮಿಕ ಹಂತದಿಂದಲೇ ಮಕ್ಕಳ ಆರೋಗ್ಯದ ಜತೆ ಉತ್ತಮ ಶಿಕ್ಷಣ ನೀಡುವ ಕೆಲಸವಾಗುತ್ತಿದೆ. ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ನೀಡುವ ಆಹಾರದಲ್ಲಿ ಪೌಷ್ಟಿಕ, ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಜೆಬಿಹಳ್ಳಿ ಗ್ರಾಪಂ ಉಪಾಧ್ಯಕ್ಷ ಅಶೋಕ್ ಮಾತನಾಡಿ, ಒಂದು ಕಾಲದಲ್ಲಿ ಶಾಲೆ ಅಂದರೆ ಕೇವಲ ಪಾಠ ಪ್ರವಚನಕ್ಕೆ ಸೀಮಿತವಾಗಿದ್ದವು. ಇಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಶಾಲಾ ಆವರಣದಲ್ಲಿ ಪೋಷಣ ಅಭಿಯಾನದ ಉದ್ದೇಶದಿಂದ ಮಕ್ಕಳು ರಚಿಸಿದ್ದ ಚಿತ್ರಗಳು ಗಮನ ಸೆಳೆದವು.
ಶಿಕ್ಷಕರಾದ ಎಲ್.ರಾಮಲಿಂಗಪ್ಪ, ಯರ್ರಿಸ್ವಾಮಿ, ಭೀಮೇಶ್, ತಿಪ್ಪೇಸ್ವಾಮಿ, ಚಂದ್ರಾನಾಯ್ಕ, ಅಂಗನವಾಡಿ ಶಿಕ್ಷಕಿಯರಾದ ನಾಗರತ್ನ, ಸುಮಂಗಲಾ, ತಿಮ್ಮಕ್ಕ ಇದ್ದರು.