ಕಲಬುರಗಿ: ಬಿಸಿಲ ನಗರಿ ಕಲಬುರಗಿಯಲ್ಲಿ ನಡೆಯುತ್ತಿರುವ 85ನೇ ಸಾಹಿತ್ಯ ಸಮ್ಮೇಳನದ ಅಂತಿಮ ದಿನವಾದ ಇಂದು ಸಮ್ಮೇಳನ 6 ನಿರ್ಣಯಗಳನ್ನು ತೆಗೆದುಕೊಂಡಿದೆ.
ಹೀಗೆ ತೆಗೆದುಕೊಂಡ ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಿ ಅವುಗಳನ್ನು ಪೂರೈಸಲು ಒತ್ತಾಯ ಮಾಡಲಾಗುತ್ತದೆ. ವಾಡಿಕೆಯಂತೆ ಈ ಬಾರಿ 6 ನಿರ್ಣಯಗಳನ್ನು ಕೈಗೊಂಡಿದ್ದು ಅವುಗಳು ಇಂತಿವೆ.
ನಿರ್ಣಯ 1
85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಿಕೊಟ್ಟ ಸ್ವಾಗತ ಸಮಿತಿ, ವಿವಿಧ ಸಮಿತಿ, ಜಿಲ್ಲಾಡಳಿತ, ಕಾರ್ಯಕರ್ತರಿಗೆ, ಆತಿಥ್ಯ ತೋರಿದ ಜನರಿಗೆ ಕೃತಜ್ಞತೆ.
ನಿರ್ಣಯ 2
ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು ಎಂಬುದು ಒಕ್ಕೊರಲ ಆಗ್ರಹ.
ನಿರ್ಣಯ 3
ಸಂವಿಧಾನದ 371 ಜೆ ಕಲಂನ ಲೋಪದೋಷವನ್ನು ಶೀಘ್ರ ನಿವಾರಿಸಿ, ಅದರ ಸಮರ್ಪಕ ಅನುಷ್ಠಾನಕ್ಕೆ ಸರ್ಕಾರ ಕ್ರಮಕೈಗೊಳ್ಳಬೇಕು. ನಂಜುಂಡಪ್ಪ ವರದಿ ಜಾರಿ ಮಾಡಿ ತಾರತಮ್ಯ ನಿವಾರಿಸಲು ಒತ್ತಾಯ.
ನಿರ್ಣಯ 4
ಕಲ್ಯಾಣ ಕರ್ನಾಟಕದ ಸ್ಮಾರಕಗಳನ್ನು ಕಾಲಮಿತಿಯಲ್ಲಿ ಅಭಿವೃದ್ಧಿಪಡಿಸಬೇಕು.
ನಿರ್ಣಯ 5
ಆಂಧ್ರ ಪ್ರದೇಶದ ಕನ್ನಡ ಶಾಲೆಗಳನ್ನು ಅಲ್ಲಿನ ಸರ್ಕಾರ ಮುಚ್ಚುತ್ತಿರುವುದನ್ನು ಸಮ್ಮೇಳನ ತೀವ್ರವಾಗಿ ಖಂಡಿಸುತ್ತದೆ. ಮತ್ತು ಆಂಧ್ರ ಮಾತ್ರವಲ್ಲದೇ ಗಡಿ ಪ್ರದೇಶದ ಕನ್ನಡ ಶಾಲೆ ಮುಚ್ಚದಂತೆ ಸರ್ಕಾರ ಪ್ರಯತ್ನಿಸಬೇಕು.
ನಿರ್ಣಯ 6
ಗಡಿ ವಿಚಾರದಲ್ಲಿ ಕೆಣಕುತ್ತಿರುವ ಮಹಾರಾಷ್ಟ್ರದ ಉದ್ಧಟತನವನ್ನು ಸಾಹಿತ್ಯ ಪರಿಷತ್ ಖಂಡಿಸಿದ್ದು, ಇದೀಗ ಸಮ್ಮೇಳನ ಕೂಡ ಖಂಡಿಸುತ್ತದೆ. ಕೂಡಲೇ ಮಹಾಜನ ವರದಿ ಅನುಷ್ಠಾನ ಮಾಡಿ ವಿವಾದ ಅಂತ್ಯ ಮಾಡಬೇಕು ಎಂಬುದಾಗಿ ನಿರ್ಣಯಿಸಲಾಗಿದೆ.