ಬಂಕಾಪುರ: ರಂಜಾನ್ ಹಬ್ಬದ ಸಮಯದಲ್ಲಿ ಮಸೀದಿ, ದರ್ಗಾಗಳಲ್ಲಿ ಧ್ವನಿವರ್ಧಕಗಳ ಮೂಲಕ ಆಜಾನ್ ಕೂಗುವುದನ್ನು ಮತ್ತು ಸಾಮೂಹಿಕ ನಮಾಜ್ ಮಾಡುವುದನ್ನು ಸರ್ಕಾರ ಕಡ್ಡಾಯವಾಗಿ ನಿಷೇಧಿಸಿದೆ. ಇದರ ಉಲ್ಲಂಘನೆಯಾದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಿಎಸ್ಐ ಸಂತೋಷಗೌಡ ಪಾಟೀಲ ಹೇಳಿದರು.
ರಂಜಾನ್ ಹಬ್ಬದ ನಿಮಿತ್ತ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ರಂಜಾನ್ ಹಬ್ಬದ ನೆಪದಲ್ಲಿ ಮಸೀದಿ, ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ. ದೇಶಾದ್ಯಂತ ಕರೊನಾ ವೈರಸ್ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಅದನ್ನು ತಡೆಗಟ್ಟಲು ಎಲ್ಲರೂ ಪೊಲೀಸರ ಜತೆ ಸಹಕರಿಸಬೇಕು. ಕಾನೂನು ಮೀರಿ ನಡೆಯುವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಮಸೀದಿಗಳಿಂದ ಧ್ವನಿವರ್ಧಕಗಳ ಮೂಲಕ ಮೇಲ್ವಿಚಾರಕರು ಸಮುದಾಯಕ್ಕೆ ಯಾವುದೇ ಮಾಹಿತಿ ನೀಡುವಂತಿಲ್ಲ. ಮೌಜ್ಜನ್ ಅಥವಾ ಪೇಶ ಇಮಾಮ್ವರು ರಂಜಾನ್ ತಿಂಗಳಲ್ಲಿ ರೋಜಾ ಕುರಿತು ಇಫ್ತಾರ್ ಬಗ್ಗೆ ಮನೆಮನೆಗೆ ತೆರಳಿ ಮಾಹಿತಿ ನೀಡುವುದಾದರೆ ಕಡ್ಡಾಯವಾಗಿ ಪೊಲೀಸ್ ಠಾಣೆಯಿಂದ ಕರ್ಫ್ಯೂ ಎಮರ್ಜೆನ್ಸಿ ಪಾಸ್ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
ಸಾರ್ವಜನಿಕಕ ಸ್ಥಳಗಳಲ್ಲಿ ಪ್ರವಚನ, ನಮಾಜ್, ಇಫ್ತಿಯಾರ್ ಕೂಟ, ಸಾಮೂಹಿಕ ಭೋಜನ ಮಾಡುವಂತಿಲ್ಲ. ಮಸೀದಿ, ಮೊಹಲ್ಲಾ ಗಳಲ್ಲಿ ಸಾರ್ವಜನಿಕವಾಗಿ ತಂಪುಪಾನೀಯ, ಸಿಹಿ ಪದಾರ್ಥ, ಗಂಜಿ, ಜ್ಯೂಸ್ ವಿತರಿಸುವಂತಿಲ್ಲ. ಮಸೀದಿ, ದರ್ಗಾದ ಸುತ್ತಲೂ ಯಾವುದೇ ಉಪಹಾರದ ಅಂಗಡಿ ಹಚ್ಚುವಂತಿಲ್ಲ. ಸರ್ಕಾರ ಘೊಷಿಸಿರುವ ನಿಯಮ ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು ಎಂದರು.
ಅಂಜುಮನ್ ಸಂಸ್ಥೆ ಅಧ್ಯಕ್ಷ ಮಹಮ್ಮದ ಹುಸೇನ ಖತೀಬ, ತಹಮ್ಮಿದ್ ಖಾಜಿ, ಮಹಮ್ಮದಗೌಸ್ ಗುಲ್ಮಿ, ಎ.ಸಿ. ಜಮಾದಾರ, ಆನಂದ ವಳಗೇರಿ, ರುದ್ದಪ್ಪ ಪವಾಡಿ, ಇತರರು ಇದ್ದರು.