ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಶುಕ್ರವಾರ ಇನ್ಸ್ಟಾಗ್ರಾಂನಲ್ಲಿ ಲೈವ್ ಚಾಟ್ ನಡೆಸಿ, ತಮ್ಮ ತಂಡದ ಪರ ಮಾತನಾಡಿದರು. ಅಲ್ಲದೆ, ಕರೊನಾ ವಿರುದ್ಧ ಹೋರಾಡಲು ನಿಧಿ ಸಂಗ್ರಹಕ್ಕೆ ಮುಂದಾದರು.
ವಿಡಿಯೋ ಆರಂಭದಲ್ಲೇ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ ಉಭಯ ಆಟಗಾರರು ಇಂತಹ ಕಷ್ಟದ ಸಮಯದಲ್ಲಿ ಧೈರ್ಯವಾಗಿರಿ, ವೈರಸ್ನಿಂದ ಸಂಕಷ್ಟಕ್ಕೀಡಾಗಿರುವ ಜನರು ಅದರಿಂದ ಹೊರಬರಲು ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಮನವಿ ಮಾಡಿದರು.
ಅಂದಹಾಗೆ 2016ರ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 248 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ಈ ಪಂದ್ಯದಲ್ಲಿ ಕೊಹ್ಲಿ-ಡಿವಿಲಿಯರ್ಸ್ 229 ರನ್ಗಳ ಅತ್ಯಧಿಕ ಜತೆಯಾಟ ಆಡಿದ್ದರು. ಇಬ್ಬರು ಸಹ ಸೆಂಚುರಿ ಬಾರಿಸಿದ್ದರು. ಇದು ಉಭಯ ಆಟಗಾರರಿಗೂ ಮತ್ತು ಅಭಿಮಾನಿಗಳಿಗೂ ಸ್ಮರಣೀಯ ಆಟವಾಗಿದೆ. ಹೃದಯಸ್ಪರ್ಶಿ ಘಟನೆಯನ್ನು ನೆನಪಿಸಿ, ಕೊಹ್ಲಿ ಮತ್ತು ಡಿವಿಲಿಯರ್ಸ್ ತಮ್ಮ ಬ್ಯಾಟ್ಸ್, ಜರ್ಸಿ ಮತ್ತು ಗ್ಲೋವ್ಸ್ಗಳನ್ನು ಹರಾಜಿಗಿಡಲು ನಿರ್ಧರಿಸಿದ್ದಾರೆ. ಇದರಿಂದ ಬಂದ ಹಣವನ್ನು ಕರೊನಾ ವಿರುದ್ಧ ಹೋರಾಡಲು ಭಾರತ ಮತ್ತು ದಕ್ಷಿಣ ಆಫ್ರಿಕಾಕ್ಕೆ ನೀಡುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಆರ್ಸಿಬಿ ತಂಡದ ಬಗ್ಗೆ ಭಾವುಕರಾದ ಕೊಹ್ಲಿ, ಹಲವು ಏರಿಳಿತಗಳಲ್ಲೂ ನಮಗೆ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಆರ್ಸಿಬಿ ಪರ ಆಡಿದ್ದರ ಅನುಭವ ಹಂಚಿಕೊಂಡ ಕೊಹ್ಲಿ, ಅದೊಂದು ಅತಿವಾಸ್ತವಿಕವಾಗಿದ್ದು, ಐಪಿಎಲ್ನಲ್ಲಿ ಮತ್ತೊಂದು ತಂಡದಲ್ಲಿ ಆಡುವುದಿಲ್ಲ ಎಂದು ವಾಗ್ದಾನ ಮಾಡಿ, ಏನೇ ಆಗಲಿ ನಾನೆಂದಿಗೂ ಆರ್ಸಿಬಿಯನ್ನು ಬಿಡುವುದೇ ಇಲ್ಲ ಎಂದು ಡಿವಿಲಿಯರ್ಸ್ಗೆ ಹೇಳಿದರು. ಅಂದಹಾಗೆ ಕೊಹ್ಲಿ 2011ರಿಂದಲೂ ಆರ್ಸಿಬಿಯಲ್ಲೇ ಇದ್ದಾರೆ.
ಇದೇ ವೇಳೆ ಕೊಹ್ಲಿ ಮತ್ತು ತಮ್ಮ ನಡುವಿನ ಸ್ನೇಹದ ಬಗ್ಗೆ ಹೇಳಿಕೊಂಡ ಡಿವಿಲಿಯರ್ಸ್ ನಮ್ಮಿಬ್ಬರ ಸ್ನೇಹ ಸಮಯರಹಿತ ಎಂದರೆ, ಕೊಹ್ಲಿ, ನಮ್ಮ ಗೆಳೆತನ ನಂಬಿಕೆಯ ಅಡಿಪಾಯದ ಮೇಲಿದೆ ಎಂದು ತಿಳಿಸಿದರು. (ಏಜೆನ್ಸೀಸ್)
ಲಾಕ್ಡೌನ್ನಲ್ಲಿ ಇನ್ನಷ್ಟು ವಿನಾಯಿತಿ ನೀಡಿದ ಕೇಂದ್ರ ಸರ್ಕಾರ; ಆದರೆ ಷರತ್ತುಗಳು ಅನ್ವಯ