More

    ಬೇಸಿಗೆಯಲ್ಲಿ ಲೋಡ್‌ಶೆಡ್ಡಿಂಗ್ ಮಾಡಲ್ಲ

    ಬೀರೂರು: ಬೇಸಿಗೆ ಆರಂಭವಾಗಿದ್ದು ಬೀರೂರು ವಲಯದಲ್ಲಿ ಲೋಡ್ ಶೆಡ್ಡಿಂಗ್‌ನಿಂದ ರೈತರಿಗೆ ಸಮಸ್ಯೆಯಾಗದಂತೆ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದ್ದೇವೆ ಎಂದು ಬೀರೂರು ಮೆಸ್ಕಾಂ ಕಾರ್ಯಪಾಲಕ ಅಭಿಯಂತರ ನಂದೀಶ್ ತಿಳಿಸಿದರು.

    ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಕುಂದುಕೊರತೆ ಆಲಿಸಿ ಮಾತನಾಡಿ, ಮೆಸ್ಕಾಂಗೆ ಬರುವ ದೂರುಗಳನ್ನು ತಕ್ಷಣ ಬಗೆಹರಿಸುವ ಪ್ರಯತ್ನ ನಡೆದಿದೆ. ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಆಗದಂತೆ ಕ್ರಮಕೈಗೊಳ್ಳಲಾಗಿದೆ ಎಂದರು.
    ಕಳೆದ ಜನಸಂಪರ್ಕ ಸಭೆಯಲ್ಲಿ ಬಂದಿದ್ದ ದೂರುಗಳನ್ನು ಪರಿಹರಿಸಲಾಗಿದೆ. ವಿದ್ಯುತ್‌ಗೆ ಬದಲಾಗಿ ರೈತರ ಜಮೀನುಗಳಲ್ಲಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿ ಅದರಿಂದಲೂ ಬೋರ್‌ವೆಲ್‌ಗಳಿಂದ ನೀರೆತ್ತುವ ಯೋಜನೆಯನ್ನು ಶೀಘ್ರದಲ್ಲಿ ಎಲ್ಲ ರೈತರಿಗೂ ತಲುಪಿಸುವ ಕಾರ್ಯ ಆರಂಭವಾಗಲಿದೆ ಎಂದರು.
    ಹುಲ್ಲೇಹಳ್ಳಿ ರೈತ ವೆಂಕಟೇಶಪ್ಪ ಮಾತನಾಡಿ, ನನ್ನ ತೋಟದಲ್ಲಿರುವ ಹಳೇ ವಿದ್ಯುತ್ ಲೈನ್ ಬದಲಿಸಿ ಹೊಸ ಲೈನ್ ಅಳವಡಿಕೆ ಕಾರ್ಯ ಅರ್ಧಂಬರ್ಧ ಮಾಡಿದ್ದಾರೆ. ಇದನ್ನು ಬೇಗ ಪೂರ್ಣಗೊಳಿಸಬೇಕೆದಂದು ಮನವಿ ಮಾಡಿದರು.
    ಜೋಡಿತಿಮ್ಮಾಪುರ ಗ್ರಾಮದ ವಸಂತ ಮಾತನಾಡಿ, ಹನುಮಾಪುರ ಗ್ರಾಮದ ತೋಟದಲ್ಲಿ ಒಂದು ವರ್ಷದಲ್ಲಿ 2-3 ಬಾರಿ ವಿದ್ಯುತ್ ಲೈನ್ ತುಂಡಾಗುತ್ತಿದೆ. ಹಳೇ ತಂತಿ ಸರಿಪಡಿಸಿ ಹೋಗುತ್ತಿದ್ದಾರೆಯೇ ಹೊರತು ಹೊಸ ಲೈನ್ ಅಳವಡಿಸಲು ಮುಂದಾಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.
    ಜೋಡಿತಿಮ್ಮಾಪುರ ಗ್ರಾಮದ ಓಂಕಾರಪ್ಪ ಮಾತನಾಡಿ, ರೈಲ್ವೆ ಗೇಟ್‌ನ ಬಳಿಯಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆ ಅಂಗಡಿ ಮುಂಗಟ್ಟುಗಳು ಇದ್ದು, ಅವುಗಳನ್ನು ಕಬ್ಬಿಣದ ಶೀಟ್‌ನಿಂದ ನಿರ್ಮಿಸಲಾಗಿದೆ. ಇತ್ತೀಚೆಗೆ ಅವುಗಳ ಮೇಲೆಯೇ ಪವರ್ ಲೈನ್ ಎಳೆಯಲಾಗಿದೆ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
    ಬೀರೂರಿನ 9ನೇ ವಾರ್ಡ್‌ನಲ್ಲಿ ನನ್ನ ಮನೆ ಬಾಗಿಲಲ್ಲಿರುವ ವಿದ್ಯುತ್ ಕಂಬ ತೆರವು ಮಾಡುವಂತೆ ಒಂದು ವರ್ಷದಿಂದ ಮನವಿ ಮಾಡಿದರೂ ಕ್ರಮಕೈಗೊಂಡಿಲ್ಲ ಎಂದು ಶಿವಕುಮಾರ್ ಎಂಬುವರು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಥಳ ಪರಿಶೀಲಿಸಿ ಕಂಬ ಸ್ಥಳಾಂತರಿಸುವುದಾಗಿಅಧಿಕಾರಿಗಳು ಭರವಸೆ ನೀಡಿದರು.
    ವಿಭಾಗೀಯ ಕಚೇರಿ ಅಭಿಯಂತರ ಲಿಂಗರಾಜು ಮಾತನಾಡಿ, ಹುಲ್ಲೇಹಳ್ಳಿ ಮತ್ತು ಹನುಮಾಪುರ ಗ್ರಾಮಗಳ ಸಮಸ್ಯೆಗಳ ಅರಿವಿದೆ. ಕಾಮಗಾರಿಗೆ ಅಂದಾಜುಪಟ್ಟಿ ತಯಾರಿಸಲಾಗಿದೆ. ಜೋಡಿತಿಮ್ಮಾಪುರ ರೈಲ್ವೆ ಗೇಟ್ ಅಂಗಡಿಗಳ ಮೇಲೆ ಎಳೆದಿರುವ ವಿದ್ಯುತ್ ಲೈನ್ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಮಜಾಯಿಷಿ ನೀಡಿದರು.
    ಚಿಕ್ಕಮಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್ ಲೋಕೇಶ್, ಎಇ ರಮೇಶ್, ಯಗಟಿ ಎಇ ರಮೇಶ್, ಜೆಇ ಕಿಶೋರ್ ರಾಜ್, ಎಇ ಸುಧಾ, ಕಂದಾಯ ಶಾಖೆಯ ಓಂಕಾರಮ್ಮ ಮತ್ತು ಗ್ರಾಹಕರು, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts