ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಅಭಿಯಾನ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿವೆ. ಪಕ್ಷಾತೀತವಾಗಿ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.
ಆಸ್ಪತ್ರೆ ಕೊಡದಿದ್ದರೆ ಮತ ನೀಡುವುದಿಲ್ಲ ಎಂಬ ಎಚ್ಚರಿಕೆಯೂ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿವಿಧ ಸಂಘಟನೆಗಳು ವಿಭಿನ್ನ ರೀತಿಯ ಹೋರಾಟ ಮಾಡಲು ಸಿದ್ಧತೆ ಮಾಡಿಕೊಂಡಿವೆ. ಟ್ವಿಟ್ಟರ್ ಅಭಿಯಾನ, ರಕ್ತದಲ್ಲಿ ಪತ್ರ, ಬೆಂಗಳೂರಿನಲ್ಲಿ ಧರಣಿ, ಮುಂತಾದ ಹಲವು ಯೋಜನೆಗಳು ಸಿದ್ಧವಾಗಿವೆ.
ಟ್ವಿಟ್ಟರ್ ಅಭಿಯಾನ
‘ನೋ ಹಾಸ್ಪಿಟಲ್ ನೋ ವೋಟ್’ ಎಂಬ ಹ್ಯಾಷ್ಟ್ಯಾಗ್ ಬಳಸಿ ಜು. 24ರಂದು ಸಾಯಂಕಾಲ 5 ಗಂಟೆಗೆ ಟ್ವಿಟ್ಟರ್ ಅಭಿಯಾನ ನಡೆಸಲು ಜಿಲ್ಲೆಯ ಯುವಕರ ತಂಡವೊಂದು ಸಜ್ಜಾಗಿದೆ. ಈ ಕುರಿತು ಫೇಸ್ಬುಕ್, ವ್ಯಾಟ್ಸ್ಆಪ್ಗಳಲ್ಲಿ ಈಗಾಗಲೇ ಪೋಸ್ಟರ್ ಹರಿದಾಡುತ್ತಿದೆ. ಪ್ರಧಾನಿ, ಗೃಹ ಸಚಿವ ಅಮಿತ್ಷಾ, ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯಾ, ಮುಖ್ಯ ಮಂತ್ರಿ ಹಾಗೂ ಆರೋಗ್ಯ ಸಚಿವ ಸುಧಾಕರ ಅವರಿಗೆ ಟ್ಯಾಗ್ ಮಾಡಲು ಸೂಚಿಸಲಾಗಿದೆ.
ಸೌಲಭ್ಯಗಳು ವಿಳಂಬ
2019 ರಲ್ಲಿ ‘ವಿ ನೀಡ್ ಎಮರ್ಜೆನ್ಸಿ ಹಾಸ್ಪಿಟಲ್’ ಎಂಬ ಅಭಿಯಾನ ಉತ್ತರ ಕನ್ನಡದಲ್ಲಿ ಘಟ್ಟಿಯಾಗಿ ನಡೆದಿತ್ತು. ಪರಿಣಾಮ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವರು ಜಿಲ್ಲೆಗೆ ಆರೋಗ್ಯ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದರು. ಅದರಂತೆ ಕೆಲವು ಸೌಲಭ್ಯಗಳನ್ನು ಮಂಜೂರು ಮಾಡಿದರೂ ಅದನ್ನು ಜಾರಿಗೆ ತರುವಲ್ಲಿ ವಿಳಂಬ ಮಾಡುತ್ತಿರುವುದು ಕಂಡುಬಂದಿದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿಳಂಬ ನೀತಿ ಜನರ ಅಸಮಾಧಾನಕ್ಕೆ ಕಾರಣವಾಗಿದೆ. 2019ರಲ್ಲೇ ಹಣ ಮಂಜೂರಾದರೂ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆ ಕಟ್ಟಡ ನಿರ್ಮಾಣ ವಿಳಂಬವಾಗಿದೆ. ಈಗಿನ್ನೂ ಕಟ್ಟಡ ಕಾಮಗಾರಿ ಪ್ರಾಥಮಿಕ ಹಂತದಲ್ಲಿದೆ. ಅದರೊಟ್ಟಿಗೆ ಟ್ರಾಮಾ ಸೆಂಟರ್ ಹಾಗೂ ಇನ್ನಿತರ ಮಲ್ಟಿ ಸ್ಪೆಷಾಲಿಟಿ ಸೌಲಭ್ಯಗಳನ್ನು ಒದಗಿಸಲು 40 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಅಧಿವೇಶನದಲ್ಲಿ ಮಾಹಿತಿ ನೀಡಿದ್ದರು. ಆದರೆ, ಆಸ್ಪತ್ರೆ ಕಟ್ಟಡ ನಿರ್ವಣವಾಗಿ ಎಂಆರ್ಐ, ಟ್ರಾಮಾ ಸೆಂಟರ್ ಮುಂತಾದ ಮಲ್ಟಿ ಸ್ಪೆಷಾಲಿಟಿ ಸೌಲಭ್ಯಗಳು ಜನರ ಬಳಕೆಗೆ ದೊರಕಲು ಇನ್ನೆರಡು ವರ್ಷವಾದರೂ ಬೇಕಾಗಲಿವೆ.