More

    ಆರೋಪಿ ದಿಶಾ ರವಿಗೆ ಇಂದೂ ಜಾಮೀನು ಸಿಕ್ಕಿಲ್ಲ; ‘ಟೂಲ್​ಕಿಟ್​ ಎಂದರೇನು ?’ ಎಂದು ಕೇಳಿದ ನ್ಯಾಯಾಧೀಶರು

    ನವದೆಹಲಿ: ಟೂಲ್​ಕಿಟ್​ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ದಿಶಾ ರವಿಗೆ ಇಂದು ಕೂಡ ಜಾಮೀನು ಸಿಕ್ಕಿಲ್ಲ. ಪ್ರಕರಣದಲ್ಲಿ ಒಂದು ಗಂಟೆ ಕಾಲ ವಾದವಿವಾದ ಆಲಿಸಿ, ಹಲವಾರು ಕಠಿಣ ಪ್ರಶ್ನೆಗಳನ್ನು ಕೇಳಿದ ದೆಹಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಧರ್ಮೇಂದ್ರ ರಾಣಾ, ತಮ್ಮ ಆದೇಶವನ್ನು ಮಂಗಳವಾರ(ಫೆಬ್ರವರಿ 23)ಕ್ಕೆ ಕಾಯ್ದಿರಿಸಿಕೊಂಡಿದ್ದಾರೆ.

    ದೆಹಲಿ ಪೊಲೀಸರು, ಕಳೆದ ಶನಿವಾರ ಚಳುವಳಿಕಾರರಾದ ದಿಶಾ ರವಿಯನ್ನು ಬೆಂಗಳೂರಿನಿಂದ ಬಂಧಿಸಿದ್ದರು. ಜನವರಿ 26 ರಂದು ರೈತ ಹೋರಾಟದ ಹೆಸರಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರದ ಮುಖ್ಯ ಸಂಚುಕೋರರಾಗಿ ಹೆಸರಿಸಿ, ಖಾಲಿಸ್ತಾನಿ ಗುಂಪನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ ಟೂಲ್​ಕಿಟ್ಅನ್ನು ತಯಾರಿಸಿ ಹರಡಿದ್ದರೆಂದು ಆಪಾದಿಸಿದ್ದರು. ದಿಶಾ ರವಿ ಜಾಮೀನು ಕೋರಿ ದೆಹಲಿ ಕೋರ್ಟ್​ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆಯಿತು.

    ಇದನ್ನೂ ಓದಿ: ಏನೋ ಮಾಡಲು ಹೋಗಿ ಮಾಡಬಾರದ್ದನ್ನು ಮಾಡಿ ದಿಶಾಳನ್ನು ಸಂಕಷ್ಟಕ್ಕೆ ಸಿಲುಕಿಸಿದ ಗ್ರೇಟಾ ಮಾಡಿದಳೊಂದು ಟ್ವೀಟ್‌…

    ದಿಶಾ ರವಿ ವಕೀಲ ಸಿದ್ಧಾರ್ಥ್ ಅಗರ್​ವಾಲ್, “ಬೆಂಗಳೂರಿಗೆ ಸೇರಿದ 22 ವರ್ಷದ ದಿಶಾಗೆ ಪ್ರತ್ಯೇಕತಾವಾದಿಗಳೊಂದಿಗೆ ಯಾವುದೇ ಸಂಪರ್ಕವಿಲ್ಲ. ದಿಶಾರ ಚಾಟ್​ಗಳು ಪೊಯೆಟಿಕ್ ಜಸ್ಟೀಸ್ ಫೌಂಡೇಶನ್​(ಪಿಜೆಎಫ್)ನೊಂದಿಗೆ ಇವೆ ಎಂದು ಹೇಳಲಾಗಿದೆ. ಆದರೆ ಅದು ನಿರ್ಬಂಧಿತ ಸಂಘಟನೆಯಲ್ಲ” ಎಂದರು. ಮೂರು ದಿನ ನ್ಯಾಯಾಂಗ ಬಂಧನದಲ್ಲಿ, ಮತ್ತೆ ಪೊಲೀಸ್ ಬಂಧನದಲ್ಲಿ ಇಟ್ಟು ದಿಶಾರನ್ನು ಸಹ-ಆರೋಪಿಯೊಂದಿಗೆ ವಿಚಾರಣೆ ನಡೆಸುವುದೇ ಪೊಲೀಸರ ಯೋಜನೆಯಾಗಿದೆ ಎಂದರು.

    ನ್ಯಾಯಾಧೀಶರು, “ಆರೋಪಿ ಮತ್ತು ಜನವರಿ 26ರ ಹಿಂಸಾಚಾರದ ನಡುವೆ ಲಿಂಕ್ ತೋರಿಸಲು ನೀವು ಸಂಗ್ರಹಿಸಿರುವ ಸಾಕ್ಷ್ಯಾಧಾರಗಳು ಏನು? ಟೂಲ್​ಕಿಟ್​ನಲ್ಲಿ ಅವಳ ಪಾತ್ರವಿರುವ ಬಗ್ಗೆ ಮತ್ತು ಅವಳು ಪ್ರತ್ಯೇಕತಾವಾದಿಗಳೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ನೀವು ವಾದ ಮಾಡಿದ್ದೀರಿ…” ಎಂದು ಕೇಳಿದರು. ದೆಹಲಿ ಪೊಲೀಸರನ್ನು ಪ್ರತಿನಿಧಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, “ಸಾಂದರ್ಭಿಕ ಪುರಾವೆಗಳ ಮೇಲೆ ಮಾತ್ರ ಸಂಚನ್ನು ಕಾಣಬಹುದು” ಎಂದಾಗ, “ಹಾಗಿದ್ದರೆ ದಿಶಾಳನ್ನು ಜನವರಿ 26ರ ಹಿಂಸಾಚಾರಕ್ಕೆ ಲಿಂಕ್ ಮಾಡುವ ಯಾವುದೇ ಪುರಾವೆ ನಿಮ್ಮ ಬಳಿ ಇಲ್ಲ ?” ಎಂದು ಮರುಪ್ರಶ್ನೆ ಹಾಕಿದರು.

    ಇದನ್ನೂ ಓದಿ: ಗ್ರೆಟಾ ಟೂಲ್​ಕಿಟ್​​ ಪ್ರಕರಣ : ವಕೀಲೆ ನಿಕಿತಾ ಜೇಕಬ್​ಗೆ ನಿರೀಕ್ಷಣಾ ಜಾಮೀನು

    “ಜನವರಿ 26 ರಂದು ವಸ್ತುತಃ ಕಾನೂನು ಉಲ್ಲಂಘನೆ ಮಾಡಿದವರೊಂದಿಗೆ ದಿಶಾರನ್ನು ಹೇಗೆ ಕನೆಕ್ಟ್ ಮಾಡುತ್ತೀರಿ ?” ಎಂದು ನ್ಯಾಯಾಧೀಶರು ಕೇಳಿದರು. “ಸಂಚಿನ ವಿಷಯದಲ್ಲಿ ಎಕ್ಸಿಕ್ಯೂಷನ್ ಮತ್ತು ಪ್ಲಾನಿಂಗ್ ಬೇರೆ ಬೇರೆಯಾಗಿರುತ್ತವೆ” ಎಂಬ ರಾಜು ಅವರ ಸ್ಪಷ್ಟನೆಗೆ ಮಣಿಯದ ನ್ಯಾಯಾಧೀಶರು, “ಹಾಗಿದ್ದರೆ ನೇರವಾದ ಲಿಂಕ್ ಇಲ್ಲ ಎಂದು ನಾನು ಅರ್ಥಮಾಡಿಕೊಳ್ಳಲೆ?” ಎಂದು ಕೇಳಿದರು.

    ವಿಚಾರಣೆ ವೇಳೆ ನ್ಯಾಯಾಧೀಶರು, “ಟೂಲ್​ಕಿಟ್​ ಅಂದರೆ ಏನು ?” “ಅದು ಅಪರಾಧಿಕ ಕೃತ್ಯವೇ ?” ಎಂದು ದೆಹಲಿ ಪೊಲೀಸರನ್ನು ಪ್ರಶ್ನಿಸಿದರು. ಜನವರಿ 26ರ ಹಿಂಸಾಚಾರದಲ್ಲಿ ದಿಶಾ ಪಾತ್ರ ಹೊಂದಿದ್ದರು ಎಂಬುದು ಕೇವಲ “ಊಹೆ”ಯೇ ಎಂದೂ ಒಂದು ಹಂತದಲ್ಲಿ ಪ್ರಶ್ನಿಸಿದರು. ಈ ವಿಚಾರದಲ್ಲಿ “ತಮ್ಮ ಪ್ರಜ್ನೆಗೆ ತೃಪ್ತಿಯಾಗುವವರೆಗೆ ಮುಂದುವರಿಯಲು ಸಾಧ್ಯವಿಲ್ಲ” ಎಂದ ನ್ಯಾಯಾಧೀಶರು, ತಮ್ಮ ಆದೇಶವನ್ನು ಕಾಯ್ದಿರಿಸಿದರು.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಆತಂಕವಾದ, ಹಿಂಸಾಚಾರ ಹರಡುತ್ತಿರುವವರಲ್ಲಿ ಸುಶಿಕ್ಷಿತರೂ ಇದ್ದಾರೆ : ಮೋದಿ ಕಳವಳ

    5 ರಾಜ್ಯಗಳಲ್ಲಿ ಹೆಚ್ಚುತ್ತಿದೆ ಕರೊನಾ ಸೋಂಕು : ಸುರಕ್ಷತಾ ಕ್ರಮಗಳನ್ನು ಪಾಲಿಸಿ ಎಂದ ಕೇಂದ್ರ ಸರ್ಕಾರ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts