ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ತಿರಸ್ಕರಿಸಿದ ಬೆನ್ನಲ್ಲೇ ಇಂದು ದೆಹಲಿ ನ್ಯಾಯಾಲಯ ನಾಲ್ವರು ಅಪರಾಧಿಗಳಿಗೆ ಹೊಸ ಡೆತ್ ವಾರೆಂಟ್ ಜಾರಿಗೊಳಿಸಿದೆ.
ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ಮಾ.20ರಂದು ಮುಂಜಾನೆ 5.30ಕ್ಕೆ ಗಲ್ಲಿಗೇರಿಸುವಂತೆ ಕೋರ್ಟ್ ಹೊಸ ಆದೇಶ ನೀಡಿದೆ.
ಗಲ್ಲುಶಿಕ್ಷೆ ಈಗಾಗಲೇ ಮೂರು ಬಾರಿ ಮುಂದೂಡಲ್ಪಟ್ಟಿದೆ. ಮಾರ್ಚ್ 3ರಂದು ನಿಗದಿಯಾಗಿ ಮರಣದಂಡನೆಗೆ ದೆಹಲಿ ನ್ಯಾಯಾಲಯ ಮಾ.2ರಂದು ತಡೆ ನೀಡಿತ್ತು. ಪವನ್ ಗುಪ್ತಾ ಅರ್ಜಿ ವಿಚಾರಣೆ ನಿಮಿತ್ತ ಈ ನಿರ್ಧಾರ ತೆಗೆದುಕೊಂಡಿತ್ತು.
ರಾಷ್ಟ್ರಪತಿಯವರು ಪವನ್ ಗುಪ್ತಾನ ಕ್ಷಮಾದಾನ ಅರ್ಜಿಯನ್ನು ವಜಾ ಮಾಡುತ್ತಿದ್ದಂತೆ, ಹೊಸ ಡೆತ್ ವಾರೆಂಟ್ ಜಾರಿ ಮಾಡುವಂತೆ ದೆಹಲಿ ಸರ್ಕಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅಪರಾಧಿಗಳ ಎಲ್ಲ ಕಾನೂನು ಪ್ರಕ್ರಿಯೆಗಳೂ ಮುಗಿದಿವೆ ಎಂದು ಹೇಳಿತ್ತು.
ಇಂದು ಕೂಡ ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ಅವರು ಡೆತ್ ವಾರಂಟ್ ನಿಗದಿ ಮಾಡಬಾರದು ಎಂದು ವಾದ ಮಂಡಿಸಿದರು. ರಾಷ್ಟ್ರಪತಿಗಳು ದಯಾ ಅರ್ಜಿಯನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಪವನ್ ಗುಪ್ತಾ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತಾರಾ ಎಂದು ಅವರ ಬಳಿ ವಿಚಾರಣೆ ನಡೆಸಲು ಸಮಯ ನೀಡಬೇಕು ಎಂದು ಹೇಳಿದರು. (ಏಜೆನ್ಸೀಸ್)