ನವದೆಹಲಿ : ಕರೊನಾ ಪ್ರಕರಣಗಳ ನಿರಂತರ ಏರಿಕೆಯ ಹಿನ್ನೆಲೆಯಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿಗೆ ಬರಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಕೋವಿಡ್-19 ರ ನಾಲ್ಕನೇ ಅಲೆಯನ್ನು ದೆಹಲಿ ಎದುರಿಸುತ್ತಿದೆ ಎಂದಿರುವ ಕೇಜ್ರಿವಾಲ್, ಲಾಕ್ಡೌನ್ ಮಾಡುವುದನ್ನು ಸದ್ಯಕ್ಕೆ ಪರಿಗಣಿಸಲಾಗುತ್ತಿಲ್ಲ ಎಂದಿದ್ದಾರೆ.
ದೆಹಲಿಯಲ್ಲಿ ಭಾನುವಾರದಂದು ಒಂದೇ ದಿನದಲ್ಲಿ 4,000 ಹೊಸ ಕರೊನಾ ಪ್ರಕರಣಗಳು ದಾಖಲಾಗಿದ್ದವು. ಸೋಮವಾರ, 3,548 ಹೊಸ ಪ್ರಕರಣಗಳು ಮತ್ತು 15 ಸಾವುಗಳು ದಾಖಲಾದವು. ಆದ್ದರಿಂದ ಸೋಂಕು ಹೆಚ್ಚು ಹರಡದಂತೆ ಇಂದಿನಿಂದ ಏಪ್ರಿಲ್ 30 ರವರೆಗೆ ರಾತ್ರಿ ವೇಳೆ ಜನರ ಓಡಾಟಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆ.
ಇದನ್ನೂ ಓದಿ: ರಾಜಧಾನಿಯ 260 ಕೇಂದ್ರಗಳಲ್ಲಿ 24 ಗಂಟೆಗಳೂ ಕರೊನಾ ಲಸಿಕೆ ಲಭ್ಯ
ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ಜನರ ಓಡಾಟದ ಮೇಲೆ ನಿರ್ಬಂಧ ಹೇರಲಾಗಿದೆ. ಆದರೆ ಅಗತ್ಯ ಸೇವೆಗಳಿಗೆ ಸಂಬಂಧಿಸಿದಂತೆ ವ್ಯಕ್ತಿಗಳ ಮತ್ತು ವಾಹನಗಳ ಓಡಾಟಕ್ಕೆ ಅವಕಾಶವಿದೆ. ನಗರದ ಸುಮಾರು 260 ಲಸಿಕಾ ಕೇಂದ್ರಗಳಲ್ಲಿ ರಾತ್ರಿ ವೇಳೆಯೂ ಕರೊನಾ ಲಸಿಕೆ ನೀಡಲಾಗುತ್ತಿರುವುದರಿಂದ, ಲಸಿಕೆ ಪಡೆಯಲು ಹೋಗುವವರಿಗೆ ಈ-ಪಾಸ್ ನೀಡಿ ಓಡಾಟಕ್ಕೆ ಅನುಮತಿ ನೀಡಲಾಗುವುದು ಎಂದು ಹೇಳಿದ್ದಾರೆ.
“ಪ್ರಸ್ತುತ ಪರಿಸ್ಥಿತಿಯ ಪ್ರಕಾರ, ನಾವು ಲಾಕ್ಡೌನ್ ಹೇರುವ ಬಗ್ಗೆ ಯೋಚಿಸುತ್ತಿಲ್ಲ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಂತಹ ಯಾವುದೇ ನಿರ್ಧಾರವನ್ನು ಸಾರ್ವಜನಿಕ ಸಮಾಲೋಚನೆಯ ನಂತರವೇ ತೆಗೆದುಕೊಳ್ಳಲಾಗುವುದು” ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)
ಅಮಿತ್ ಷಾ-ಆದಿತ್ಯನಾಥರ ಮೇಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ದಾಳಿ ಬೆದರಿಕೆ
ವಿರುಷ್ಕಾ ದಂಪತಿಗಳ ಪ್ರಾಣಿಪ್ರೇಮ : ಮುಂಬೈನಲ್ಲಿ ಬೀದಿ ಪ್ರಾಣಿಗಳಿಗೆ ಆಶ್ರಯ ಕೇಂದ್ರಗಳು