ಬೆಂಗಳೂರು: ಶ್ರೀನಿಡುಮಾಮಿಡಿ ಜಗದ್ಗುರು ಮಠದ ಪೀಠಾಧಿಪತಿ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿಗಳು ಎರಡನೆಯ ಸಲ ಕರೊನಾ ಸೋಂಕಿಗೆ ಒಳಗಾಗಿದ್ದು, ಸ್ವಲ್ಪ ಉಸಿರಾಟದ ಸಮಸ್ಯೆಯನ್ನೂ ಅನುಭವಿಸುತ್ತಿದ್ದು, ಮಠದಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಅವರಿಗೆ ಚಿಂತೆಯೊಂದು ಕಾಡುತ್ತಿದ್ದು, ಆ ಸಂಬಂಧ ಸುದೀರ್ಘವಾದ ಪತ್ರವೊಂದನ್ನು ಬರೆದು ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿರುವುದಷ್ಟೇ ಅಲ್ಲದೆ, ಭಕ್ತರಿಂದ-ಅನುಯಾಯಿಗಳಿಂದ ಅಭಿಪ್ರಾಯವನ್ನೂ ಕೋರಿದ್ದಾರೆ.
ಕಳೆದ ಸೆಪ್ಟೆಂಬರ್ನಲ್ಲಿ ಕೋವಿಡ್-19 ಸೋಂಕಿಗೆ ಒಳಗಾಗಿದ್ದ ನಾನು ಶೀಘ್ರವಾಗಿ ಗುಣಮುಖನಾಗಿದ್ದೆ. ಈಗ ಮತ್ತೊಮ್ಮೆ ಅಂದರೆ ಎರಡನೆಯ ಅಲೆಯಲ್ಲೂ ಕರೊನಾ ಸೋಂಕು ತಗುಲಿದ್ದು, ಸ್ವಲ್ಪ ಉಸಿರಾಟದ ಸಮಸ್ಯೆಯೂ ಇದೆ. ಒಂದು ವೇಳೆ ಕೋವಿಡ್ನಿಂದ ನನ್ನ ಅಂತ್ಯವೇನಾದರೂ ಸಂಭವಿಸಿ ಪೀಠದ ಪ್ರಗತಿಗೆ ತೊಂದರೆ ಆಗಬಾರದು ಎಂಬ ಏಕೈಕ ಕಾರಣಕ್ಕಾಗಿ ನಾನು ತುರ್ತಾಗಿ ಒಂದು ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ. ಆ ಸಂಬಂಧ ತಮ್ಮ ಅಭಿಪ್ರಾಯ-ಅನಿಸಿಕೆಗಳನ್ನು ಕೇಳುತ್ತಿರುವುದಾಗಿ ಅವರು ಸುದೀರ್ಘವಾಗಿ ಪತ್ರವೊಂದನ್ನು ಬರೆದು ಕೋರಿಕೊಂಡಿದ್ದಾರೆ.
ಪತ್ರದಲ್ಲಿ ನಿಡುಮಾಮಿಡಿ ಜಗದ್ಗುರು ಮಠ, ಧರ್ಮಗುರು ಪೀಠ, ಗೂಳೂರು ಮಹಾಸಂಸ್ಥಾನಗಳಿಗೆ ಉತ್ತರಾಧಿಕಾರಿಗಳನ್ನು ನೇಮಿಸುವ ವಿಚಾರವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದು, ಆ ಪೈಕಿ ಒಂದು ಪೀಠಕ್ಕೆ ಮಹಿಳೆಯೊಬ್ಬರನ್ನು ಉತ್ತರಾಧಿಕಾರಿ ಆಗಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಪ್ರಾಯ ಕೋರಿರುವ ಅವರ ಪತ್ರದ ವಿವರಗಳು ಈ ಕೆಳಗಿವೆ.