ಮಹಾಲಿಂಗಪುರ : ದೇಶದ ಆಡಳಿತ ವ್ಯವಸ್ಥೆಯ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯವೈಖರಿಯನ್ನು ಜನರೆದುರಿಗೆ ತೆರೆದಿಡುವ ಮಹತ್ವದ ಕಾರ್ಯವನ್ನು ಪತ್ರಕರ್ತರು ಮಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅರ್ಜುನ ಹಲಗಿಗೌಡರ ಹೇಳಿದರು.
ಪಟ್ಟಣದ ರಾಣಿ ಚನ್ನಮ್ಮ ವೃತ್ತದ ಹತ್ತಿರ ಪುರಸಭೆ ಮಳಿಗೆ ಮೇಲಿನ ಮಹಡಿಯಲ್ಲಿ ಭಾನುವಾರ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪತ್ರಿಕಾ ಕಚೇರಿ ಉದ್ಘಾಟಸಿ ಮಾತನಾಡಿದ ಅವರು, ಪತ್ರಿಕೆಗಳು ಬೆಳೆದಷ್ಟು ಸಮಾಜ ಸುಧಾರಣೆಯಾಗುತ್ತದೆ. ವಿವಿಧ ಸುದ್ದಿಗಳನ್ನು ಪ್ರಕಟಿಸಿ ಸಮಾಜದ ಕಣ್ಣು ತೆರೆಸುವ ಕೆಲಸ ಪತ್ರಕರ್ತರಿಂದ ಮಾತ್ರ ಸಾಧ್ಯ. ಇಂಥ ಪತ್ರಕರ್ತರ ಸೇವೆ ಗಮನಿಸಿ ಸರ್ಕಾರ ಅವರಿಗೆ ಬೇಕಾಗುವ ಸಕಲ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ದ್ಯಮಿ ವಿಶ್ವನಾಥ ಹಿರೇಮಠ ಮಾತನಾಡಿ, ನಮ್ಮೂರಿನಲ್ಲಿ ಒಂದು ಪತ್ರಿಕಾ ಭವನದ ಅವಶ್ಯಕತೆ ಇದೆ. ಇದು ಸರ್ಕಾರ ಮತ್ತು ಸಾರ್ವಜನಿಕರ ಸಹಕಾರದಿಂದ ಮಾತ್ರ ಆಗಲು ಸಾಧ್ಯ. ಪತ್ರಿಕಾ ಭವನ ನಿರ್ಮಾಣಕ್ಕೆ ನನ್ನ ಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ, ಕಾನಿಪ ಸಂಘದ ಅಧ್ಯಕ್ಷ ಮಹೇಶ ಆರಿ ವೇದಿಕೆ ಮೇಲಿದ್ದರು. ಕಾನಿಪ ಸಂಘದ ಜಿಲ್ಲಾ ಸದಸ್ಯ ಎಸ್.ಎಸ್. ಈಶ್ವರಪ್ಪಗೋಳ, ಸ್ಥಳೀಯ ಘಟಕದ ಕಾರ್ಯದರ್ಶಿ ಮೀರಾ ತಟಗಾರ, ಜಯರಾಮ ಶೆಟ್ಟಿ, ನಾರಣಗೌಡ ಉತ್ತಂಗಿ, ಲಕ್ಷ್ಮಣ ಕಿಶೋರ, ಶ್ರೀಶೈಲ ಹಲಗಿಗೌಡರ, ಚೇತನ ಹುಲ್ಲೂರ, ಡಾ. ಎಂ.ಎಸ್ ಕದ್ದಿಮನಿ ಇದ್ದರು.