ಲಖನೌ: ಬೃಹತ್ ಚಿನ್ನದ ನಿಕ್ಷೇಪದ ಕಾರಣಕ್ಕೆ ಉತ್ತರ ಪ್ರದೇಶದ ಸೋನಾಭದ್ರ ಜಿಲ್ಲೆ ಈಗ ಸುದ್ದಿ ಜಗತ್ತಿನ ಕೇಂದ್ರ ಬಿಂದು. ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ವರದಿ ಪ್ರಕಾರ, ಸೋನಾಭದ್ರದಲ್ಲಿ 3,350 ಟನ್ ಚಿನ್ನದ ನಿಕ್ಷೇಪ ಇರುವುದು ಗುರುವಾರ ಬಹಿರಂಗವಾಗಿದೆ.
ಚಿನ್ನದ ನಿಕ್ಷೇಪ ಇರುವ ಸೋನಾಭದ್ರ ಜಿಲ್ಲೆಯು ವಿಂಧ್ಯಾಚಲ ಮತ್ತು ಕೈಮೂರು ಬೆಟ್ಟಗಳ ನಡುವೆ ಇದೆ. ಈ ಪ್ರದೇಶವನ್ನು ಭಾರತದ ಎನರ್ಜಿ ಕ್ಯಾಪಿಟಲ್ ಎಂದೂ ಕರೆಯಲಾಗುತ್ತದೆ. ಕಾರಣ ಇಲ್ಲಿ ಬಹಳಷ್ಟು ಉಷ್ಣ ವಿದ್ಯುತ್ ಸ್ಥಾವರಗಳಿವೆ. ಇದರ ಜಿಲ್ಲಾ ಕೇಂದ್ರವಾಗಿ ರಾಬರ್ಟ್ಸ್ಗಂಜ್ ಇದೆ.
ಅಷ್ಟೇ ಅಲ್ಲ, ಈ ಪ್ರದೇಶ ಕೊಳಕು ಮಂಡಲ, ನಾಗರಹಾವು, ಬೆಳ್ಳಿಕಟ್ಟದ ಹಾವುಗಳಿಂದ ಕೂಡಿದೆ. ಈ ಹಾವುಗಳು ಜಗತ್ತಿನ ಅತ್ಯಂತ ವಿಷಕಾರಿ ಹಾವುಗಳೆಂದೇ ಪರಿಗಣಿಸಲ್ಪಟ್ಟಿವೆ. ಸೋನಾಭದ್ರ ಪ್ರದೇಶದ ಸುತ್ತಮುತ್ತ ಬೆಟ್ಟಗಳು ಇರುವ ಕಾರಣ ವಿಷಕಾರಿ ಹಾವುಗಳು ಇಲ್ಲಿರುವುದು ಸಹಜ. ಒಂದೊಮ್ಮೆ ಈ ಹಾವು ಕಡಿದರೆ, ಕಚ್ಚಿಸಿಕೊಂಡವರನ್ನು ಬದುಕಿಸುವುದು ಕಷ್ಟದ ಮಾತೇ ಸರಿ. ಸೋನಾಭದ್ರದ ವ್ಯಾಪ್ತಿಯಲ್ಲಿ ಕಂಡುಬರುವ ಕೊಳಕುಮಂಡಲ ಹಾವಂತೂ ಜಗತ್ತಿನ ಅತ್ಯಂತ ವಿಷಕಾರಿ ಹಾವು ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)