ಆಕ್ಲೆಂಡ್: ಇಲ್ಲಿನ ಈಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲೂ ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅದ್ಭುತ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಭಾರತ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2-0 ಅಂತರದಿಂದ ಮುನ್ನೆಡೆ ಸಾಧಿಸುವ ಮೂಲಕ ಸರಣಿ ಗೆಲುವಿನ ಕಡೆ ದಾಪುಗಾಲು ಇಡುತ್ತಿದೆ.
ಕಿವೀಸ್ ಪಡೆ ನೀಡಿದ 133 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ(8) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಇದರ ಬೆನ್ನಲ್ಲೇ ಮೂರನೇ ಕ್ರಮಾಂಕದಲ್ಲಿ ಬಂದ ನಾಯಕ ವಿರಾಟ್ ಕೊಹ್ಲಿ (11) ರನ್ ಗಳಿಸಿ ಬಂದಷ್ಟೇ ವೇಗವಾಗಿ ಪೆವಲಿಯನ್ ಮರಳಿದರು. ಟೀಮ್ ಇಂಡಿಯಾ 39 ರನ್ಗೆ ಪ್ರಮುಖ 2 ವಿಕೆಟ್ ಕಳೆದುಕೊಂಡು ಸ್ವಲ್ಪ ಹಿನ್ನೆಡೆ ಅನುಭವಿಸಿತ್ತು.
ಆದರೆ, ಆರಂಭಿಕನಾಗಿ ಕಣಕ್ಕಿಳಿದ ಕೆ.ಎಲ್. ರಾಹುಲ್ ಕಿವೀಸ್ ಬೌಲರ್ಗಳನ್ನು ಕೊನೆಯವರೆಗೂ ಕಾಡಿದರು. ರಾಹುಲ್ಗೆ ಸಾಥ್ ನೀಡಿದ ಶ್ರೇಯಸ್ ಅಯ್ಯರ್ ಮೊದಲ ಟಿ20 ಪಂದ್ಯದಂತೆ ಉತ್ತಮ ಜತೆಯಾಟವಾಡಿದರು. ಜಯದ ಹೊಸ್ತಿಲಲ್ಲಿ 44 ರನ್ ಗಳಿಸಿದ್ದ ಅಯ್ಯರ್ ಔಟಾಗುವ ಮೂಲಕ ಅರ್ಧಶತಕದಿಂದ ವಂಚಿತರಾದರು.
ಇತ್ತ ಕೊನೆವರೆಗೂ ಸ್ಫೋಟಕ ಆಟವಾಡಿದ ರಾಹುಲ್ ಅಂತಿಮವಾಗಿ 50 ಎಸೆತದಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದರೇ, ಶಿವಂ ದುಬೆ 8 ರನ್ ಗಳಿಸಿ ಅಜೇಯರಾಗಿ ಉಳಿದರು.
ಅಂತಿಮವಾಗಿ ಟೀಮ್ ಇಂಡಿಯಾ 17.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 135 ರನ್ ಕಲೆಹಾಕುವ ಮೂಲಕ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ, 2-0 ಅಂತರದಿಂದ ಸರಣಿ ಮುನ್ನೆಡೆ ಕಾಯ್ದುಕೊಂಡಿದೆ.
ಕಿವೀಸ್ ಪರ ಟೀಮ್ ಸೌಥಿ ಎರಡು ವಿಕೆಟ್ ಪಡೆದರೆ, ಇಸ್ ಸೊಧಿ ಒಂದು ವಿಕೆಟ್ಗೆ ತೃಪ್ತಿಪಟ್ಟರು. ಉಳಿದಂತೆ ಯಾವೊಬ್ಬ ಬೌಲರ್ ಭಾರತೀಯ ಆಟಗಾರರನ್ನು ಎದುರಿಸುವಲ್ಲಿ ವಿಫಲರಾದರು. (ಏಜೆನ್ಸೀಸ್)