ಕಾರವಾರ: ಜಿಲ್ಲಾಡಳಿತದಿಂದ ಹೊಸ ವರ್ಷ ಸ್ವಾಗತಕ್ಕೆ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಬುಧವಾರ ಮಾಹಿತಿ ನೀಡಿದ ಅವರು, ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಡಿಸೆಂಬರ್ 31 ರ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆದಿದೆ. ಸ್ಟಾಲ್ಗಳನ್ನು, ಅಮ್ಯೂಸ್ಮೆಂಟ್ ಪಾರ್ಕ್ ಇಡಲು ಈಗಾಗಲೇ ಸಿದ್ಧತೆ ನಡೆದಿದೆ. ಕನಿಷ್ಠ ಪ್ರವೇಶ ಶುಲ್ಕ ಇಟ್ಟು ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಶೀಘ್ರ ಕಾರ್ಯಕ್ರಮದ ರೂಪುರೇಷೆ ಮಾಡಲಾಗುವುದು ಎಂದು ತಿಳಿಸಿದರು.
ಕಡಲ ತೀರ ಸ್ವಚ್ಛ ಕಡಲ ತೀರ ಸ್ವಚ್ಛತೆ ಮಾಡುವ ಯಂತ್ರವು ಕಳೆದ ಹಲವು ತಿಂಗಳಿಂದ ಹಾಳಾಗಿರುವುದರಿಂದ ಟ್ಯಾಗೋರ್ ಕಡಲ ತೀರ ಕಸದಿಂದ ಕೂಡಿತ್ತು. ಪುಣೆಯಿಂದ ಇಂಜಿನಿಯರ್ ಕರೆಸಿ, ರಿಪೇರಿ ಮಾಡಿಸಲಾಗಿದ್ದು, ಕಡಲ ತೀರ ಸ್ವಚ್ಛತೆ ಪ್ರಾರಂಭಿಸಲಾಗಿದೆ. ಮುರ್ಡೇಶ್ವರ, ಗೋಕರ್ಣ ತೀರಗಳನ್ನೂ ಸ್ವಚ್ಛ ಮಾಡುವ ಕಾರ್ಯ ಮಾಡಲಾಗುವುದು ಎಂದರು.
ಗೋಕರ್ಣ ದೇವಸ್ಥಾನ ರಿಪೇಟಿ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಪ್ರವೇಶ ದ್ವಾದದ ಒಂದು ಕಂಬ ವಾಲಿದ್ದು, ಈ ಕುರಿತು ಪುರಾತತ್ವ ಇಲಾಖೆಗೆ ಪತ್ರ ಬರೆದು ತಿಳಿಸಲಾಗಿತ್ತು. ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ದುರಸ್ತಿಯ ಪ್ರಸ್ತಾವನೆ ಕಳಿಸಿದ್ದಾರೆ. ವಾಸ್ತು ಶಿಲ್ಪಕ್ಕೆ ತೊಂದರೆ ಉಂಟಾಗದಂತೆ ಅದನ್ನು ರಿಪೇರಿ ಮಾಡುವುದಾಗಿ ತಿಳಿಸಿದ್ದಾರೆ ಎಂದರು.