ಕಾರ್ಕಳ: ಮಿಯ್ಯರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ತಡರಾತ್ರಿ ಹೊಸ ವರ್ಷದ ಶುಭಾಶಯ ಕೋರಿ ರಸ್ತೆ ಮೇಲೆ ಬರೆಯುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿಯಾಗಿ ದಾರುಣವಾಗಿ ಮೃತಪಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಿವಾಸಿಗಳಾದ ಶರಣು (25), ಸಿದ್ದು (25) ಜೀವ ಕಳೆದುಕೊಂಡವರು ಎಂದು ಗುರುತಿಸಲಾಗಿದೆ. ಸ್ಥಳದಲ್ಲಿದ್ದ ತೌಸೀಫ್, ಬಸವರಾಜು ಎಂಬುವರು ಗಾಯಗೊಂಡಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳೀಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಗುರುವಾರ ತಡರಾತ್ರಿ ಮಿಯ್ಯರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಕುಳಿತು ಹ್ಯಾಪಿ ನ್ಯೂ ಇಯರ್-2021 ಎಂದು ಬರೆಯತೊಡಗಿದ್ದರು. ಇದನ್ನು ಗಮನಿಸದ ಚಾಲಕ ಕಾರನ್ನು ಚಲಾಯಿಸಿಕೊಂಡು ಹೋಗಿದ್ದನು. ಅಪಘಾತದ ತೀವ್ರತೆಗೆ ಸ್ಥಳದಲ್ಲಿ ಓರ್ವ ಸಾವಿಗೀಡಾಗಿದ್ದು, ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿಮಧ್ಯೆ ಮೃತಪಟ್ಟಿರುವುದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.