ನವದೆಹಲಿ: ಅದೆಷ್ಟೇ ಸ್ನೇಹಪರ ಬಾಂಧವ್ಯ ಹೊಂದಲು ಪ್ರಯತ್ನಿಸಿದಷ್ಟೂ ಭಾರತದ ವಿರುದ್ಧ ಒಂದಲ್ಲ ಒಂದು ಪಿತೂರಿ ನಡೆಸುವ ಚೀನಾ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಇದುವರೆಗೂ ಭಾರತದೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದ ನೇಪಾಳವನ್ನು ಭಾರತದ ಮೇಲೆ ಎತ್ತಿಕಟ್ಟಲು ಅದು ಮುಂದಾಗಿದೆ.
ನೇಪಾಳದ ಗಡಿಗೆ ಅಂಟಿಕೊಂಡಂತೆ ಹರಿಯುವ ಕಾಳಿ ನದಿಯ ಪಶ್ಚಿಮ ಭಾಗದಲ್ಲಿ ಭಾರತ ಇತ್ತಿಚೆಗೆ ಚೀನಾ ಟಿಬೆಟ್ನಲ್ಲಿರುವ ಮಾನಸ ಸರೋವರಕ್ಕೆ ತೆರಳಲು ಉತ್ತರಾಖಂಡದಿಂದ ಲಿಪುಲೇಕ್ಗೆ ಭಾರತ ಸಂಪರ್ಕ ರಸ್ತೆಯನ್ನು ನಿರ್ಮಿಸಿದೆ.
ಆದರೆ ಇದಕ್ಕೆ ತಗಾದೆ ತೆಗೆದಿರುವ ನೇಪಾಳ, ಕಾಳಿ ನದಿಯ ಪೂರ್ವಭಾಗ ನಮಗೆ ಸೇರಿದ್ದು ಎಂದು ಹೇಳಿ, ಲಿಪುಲೇಕ್ ಬಳಿ ಭಾರತ ರಸ್ತೆ ನಿರ್ಮಿಸಿರುವ ಕ್ರಮವನ್ನು ವಿರೋಧಿಸಿದೆ. ಕಳೆದ ಕೆಲವು ದಿನಗಳಿಂದ ಲಡಾಖ್ನಲ್ಲಿ ಭಾರತೀಯ ಯೋಧರೊಂದಿಗೆ ಚೀನಿ ಯೋಧರು ಜಟಾಪಟಿ ನಡೆಸುತ್ತಿರುವಂತೆ ಈ ಬೆಳವಣಿಗೆ ಕಂಡಬಂದಿದೆ.
ಮನೋಹರ್ ಪರಿಕ್ಕರ್ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಆ್ಯಂಡ್ ಅನಾಲಿಸಿಸ್ ಎಂಬ ಸಂಸ್ಥೆಯಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ಕೋವಿಡ್ ಆ್ಯಂಡ್ ಇಂಡಿಯನ್ ಆರ್ಮಿ; ರೆಸ್ಪಾನ್ಸಸ್ ಆ್ಯಂಡ್ ಬಿಯಾಂಡ್ ಎಂಬ ವೆಬಿನಾರ್ನಲ್ಲಿ ಮಾತನಾಡಿದ ಸೇನಾಪಡೆ ಮುಖ್ಯಸ್ಥ ಜನರಲ್ ಎಂ.ಎಂ. ನರವಾನೆ ಈ ವಿಷಯವನ್ನು ಪ್ರಸ್ತಾಪಿಸಿದರು.
ಕಾಳಿ ನದಿಯ ಪೂರ್ವ ಭಾಗ ನೇಪಾಳಕ್ಕೆ ಸೇರಿದ್ದು. ಇದರಲ್ಲಿ ಯಾವುದೇ ವಿವಾದವಿಲ್ಲ. ಆದರೆ, ನದಿಯ ಪಶ್ಚಿಮ ಭಾಗದಲ್ಲಿರುವ ಲಿಪುಲೇಕ್ಗೆ ಭಾರತ ರಸ್ತೆ ನಿರ್ಮಿಸಿರುವ ಕ್ರಮವನ್ನು ನೇಪಾಳ ಖಂಡಿಸಿದೆ. ಬಹುಶಃ ಅದು ಮತ್ತಾವುದೋ ರಾಷ್ಟ್ರದ ಪ್ರಚೋದನೆಗೆ ಒಳಗಾಗಿ ಹೀಗೆ ನಡೆದುಕೊಂಡಿರುವ ಸಾಧ್ಯತೆ ಇದೆ ಎಂದು ಚೀನಾದ ಹೆಸರು ಪ್ರಸ್ತಾಪಿಸದೆ ಆರೋಪಿಸಿದರು.
ಇದನ್ನೂ ಓದಿ: ಮೈಮುಲ್ ಅವ್ಯವಹಾರ ಆರೋಪ: ಮೂರು ಆಡಿಯೋ ಬಿಡುಗಡೆ ಮಾಡಿದ ಶಾಸಕ
ಉತ್ತರಾಖಂಡದ ಮೂಲಕ ಚೀನಾದ ಟಿಬೆಟ್ನಲ್ಲಿರುವ ಕೈಲಾಸ ಮಾನಸ ಸರೋವರ ಯಾತ್ರೆಗೆ ಅನುವಾಗುವಂತೆ ಭಾರತ ಲಿಪುಲೇಕ್ ಪಾಸ್ಗೆ ರಸ್ತೆಯನ್ನು ನಿರ್ಮಿಸಿದೆ. ಬಾರ್ಡರ್ ರೋಡ್ಸ್ ಆರ್ಗನೈಜೇಷನ್ ಯೋಧರು ಉತ್ತರಾಖಂಡದ ಗತಿಯಾಬ್ಗಢದಿಂದ ಲಿಪುಲೇಕ್ಗೆ 80 ಕಿ.ಮೀ. ಉದ್ದದ ಈ ರಸ್ತೆಯನ್ನು ನಿರ್ಮಿಸಿದ್ದಾರೆ. ಮೇ 8ರಂದು ಉದ್ಘಾಟನೆಗೊಂಡಿರುವ ಈ ರಸ್ತೆ ಚೀನಾಕ್ಕೆ ಅಂಟಿಕೊಂಡಿರುವ ವಾಸ್ತವ ಗಡಿರೇಖೆಯಿಂದ 5 ಕಿ.ಮೀ. ದೂರದಲ್ಲಿದೆ. ಇದರಿಂದಾಗಿ ಕೈಲಾಸ ಮಾನಸ ಸರೋವರ ಯಾತ್ರೆ ಅವಧಿ ತುಂಬಾ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಚೀನಾಕ್ಕೆ ತೀವ್ರ ಇರಿಸುಮುರಿಸು ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಅದು ಭಾರತದ ವಿರುದ್ಧ ನೇಪಾಳವನ್ನು ಎತ್ತಿಕಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಜೀವಕ್ಕೆ ದುಬಾರಿಯಾಗುತ್ತಿದೆ ದುಬೈ ಸಹವಾಸ- ಪರ ಊರಿಂದ ಬಂದ ಓರ್ವನ ಬಲಿ: ಹೆಚ್ಚುತ್ತಿದೆ ಸಾವಿನ ಸಂಖ್ಯೆ!