ಬೆಂಗಳೂರು: ತುಂಬು ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ರಾತ್ರಿಯಿಡೀ ನರಳಾಡುತ್ತ ಹತ್ತಾರು ಆಸ್ಪತ್ರೆಗಳ ಬಾಗಿಲಿಗೆ ಅಲೆದರೂ ಯಾರೊಬ್ಬರೂ ಚಿಕಿತ್ಸೆ ನೀಡಲಿಲ್ಲ. ಆಸ್ಪತ್ರೆಗಾಗಿ ನೋವಿನಲ್ಲೂ ಸತತ ಎಂಟು ಗಂಟೆ ಸುತ್ತಾಡಿ ಸುಸ್ತಾಗಿದ್ದ ಗರ್ಭಿಣಿಗೆ ಆಟೋದಲ್ಲೇ ಹೆರಿಗೆಯಾಗಿದ್ದು, ಕಣ್ಬಿಡುವ ಮುನ್ನವೇ ಹಸುಗೂಸು ಮೃತಪಟ್ಟಿದೆ.
ಆಸ್ಪತ್ರೆಗಳ ಮತ್ತು ವೈದ್ಯರ ನಿರ್ಲಕ್ಷ್ಯದಿಂದ ಮಗು ಕಳೆದುಕೊಂಡ ಮಹಿಳೆ ಶ್ರೀರಾಂಪುರದ ನಿವಾಸಿ. ನಿನ್ನೆ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಲೆಂದು ತಡರಾತ್ರಿ ಆಟೋದಲ್ಲಿ ಹೊರಟಿದ್ದರು. ವಿಕ್ಟೋರಿಯಾ, ವಾಣಿ ವಿಲಾಸ್, ಶ್ರೀರಾಂಪುರ ಸರ್ಕಾರಿ ಆಸ್ಪತ್ರೆ ಸೇರಿ ಹತ್ತಾರು ಆಸ್ಪತ್ರೆಗಳಿಗೆ ಹೋದರೂ ಬೆಡ್ ಇಲ್ಲವೆಂಬ ಸಬೂಬು ಹೇಳಿ ಅವರನ್ನು ವಾಪಸ್ ಕಳಿಸಿದ್ದರು.
ಇದನ್ನೂ ಓದಿರಿ ಬೆಂಗಳೂರಲ್ಲಿ ಪೊಲೀಸರಿಗೂ ಸಿಕ್ತಿಲ್ಲ ಟ್ರೀಟ್ಮೆಂಟ್! ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮುಖ್ಯಪೇದೆ ಬಲಿ
ರಾತ್ರಿಯಿಂದ ಬೆಳಗ್ಗೆವರೆಗೂ ಹೆರಿಗೆ ನೋವಿನಿಂದಲೇ ನರಳಾಡುತ್ತ ಆಸ್ಪತ್ರೆಗಳಿಗೆ ಅಲೆದಾಡಿದರೂ ಆಸ್ಪತ್ರೆಗಳು ಅಮಾನವೀಯವಾಗಿ ವರ್ತಿಸಿವೆ. ಕೊನೆಗೆ ಕೆಸಿ ಜನರಲ್ ಆಸ್ಪತ್ರೆಗೆ ಗರ್ಭಿಣಿ ಬಂದಿದ್ದು, ಅಷ್ಟರಲ್ಲಿ ಆಕೆಗೆ ಆಟೋದಲ್ಲೇ ಹೆರಿಗೆಯಾಗಿದೆ. ಅಮ್ಮನ ಕಾಣುವ ಮುಂಚೆಯೇ ಮಗು ಸತ್ತಿದೆ.
ವೈದ್ಯರ ಯಡವಟ್ಟಿಗೆ ಏನೂ ಅರಿಯದ ಕಂದಮ್ಮ ಬಲಿಯಾಗಿದ್ದು, ಮಗು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.