ಬೆಂಗಳೂರು: ರೈಲು ನಿಲ್ದಾಣ ಎಂದ ಕೂಡಲೆ ಕಣ್ಣಿಗೆ ಕಾಣುವ ಷೆಡ್ ರೀತಿಯ ಕಟ್ಟಡಕ್ಕೆ ಸೆಡ್ಡು ಹೊಡೆದು, ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಮಾದರಿಯ ರೈಲು ನಿಲ್ದಾಣ ದೇಶದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾರ್ಯಾಚರಣೆ ಆರಂಭಿಸಲಿದೆ.
ಬೈಯಪ್ಪನಹಳ್ಳಿಯ ರೈಲು ನಿಲ್ದಾಣವನ್ನು 314 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸಂಪೂರ್ಣ ರೈಲು ನಿಲ್ದಾಣಕ್ಕೆ ಹವಾನಿಯಂತ್ರಣ ಅಳವಡಿಸಲಾಗಿದೆ. ಅದೂ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಹೊಂದಿರುವ ದೇಶದ ಮೊದಲ ರೈಲು ನಿಲ್ದಾಣವಾಗಲಿದೆ.
ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ರೈಲ್ವೆ ಸಚಿವ ಪಿಯೂಷ್ ಗೋಯೆಲ್, ‘ಭಾರತದ ಪ್ರಮುಖ ಇಂನಿಯರ್ಗಳಲ್ಲೊಬ್ಬರಾದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಹೆಸರಿಡಲಾಗಿರುವ, ಭಾರತದ ಮೊಟ್ಟ ಮೊದಲ ಕೇಂದ್ರೀಕೃತ ಹವಾನಿಯಂತ್ರಿತ ರೈಲ್ವೆ ನಿಲ್ದಾಣ ಬೆಂಗಳೂರಿನಲ್ಲಿ ಸದ್ಯದಲ್ಲೇ ಕಾರ್ಯಾಚರಣೆ ಆರಂಭಿಸಲಿದೆ’ ಎಂದಿದ್ದಾರೆ.
ಬೆಂಗಳೂರಿನಿಂದ ಹೊರರಾಜ್ಯಗಳಿಗೆ ತೆರಳುವ ರೈಲುಗಳ ಸಂಖ್ಯೆ ಹೆಚ್ಚಾದಂತೆಲ್ಲ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಯಶವಂತಪುರ ನಿಲ್ದಾಣಗಳಲ್ಲಿನ ಒತ್ತಡ ಹೆಚ್ಚುತ್ತಿದೆ. ಈ ಸಮಸ್ಯೆ ಬಗೆಹರಿಸಲು ನೈಋತ್ಯ ರೈಲ್ವೆ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ 3ನೇ ಕೋಚಿಂಗ್ ಟರ್ಮಿನಲ್ ನಿರ್ಮಿಸಿದೆ. ಪ್ಲಾಟ್ಫಾರ್ಮ್ಗಳಲ್ಲಿ ಶೆಲ್ಟರ್ಗಳ ಅಳವಡಿಕೆ, ಒಳಾಂಗಣ ವಿನ್ಯಾಸ ಕಾರ್ಯಗಳು ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಕಾಮಗಾರಿಯಷ್ಟೇ ಬಾಕಿಯಿದೆ. 314 ಕೋಟಿ ರೂ. ವ್ಯಯಿಸಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಹೊರಾಂಗಣ ಮಾದರಿಯಲ್ಲಿ ನಿರ್ಮಿಸಲಾಗಿದ್ದು, ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರಲಿದೆ. ಬಸ್ ಬೇ ನಿರ್ಮಾಣ, ವಿದ್ಯುತ್ ಉಳಿತಾಯಕ್ಕಾಗಿ ಎಲ್ಇಡಿ ಬಲ್ಬ್ ಬಳಕೆ, ಎಸ್ಕಲೇಟರ್ ಮತ್ತು ಎಲ್ಟಿ, 250 ಕಾರು, 900 ದ್ವಿಚಕ್ರ ವಾಹನ, 5 ಬಿಎಂಟಿಸಿ ಬಸ್ ಹಾಗೂ 20 ಕ್ಯಾಬ್ಗಳ ನಿಲುಗಡೆಗೆ ಅವಕಾಶ ಸೇರಿ ಹತ್ತು ಹಲವು ಸೌಲಭ್ಯಗಳಿವೆ.