ಶಶಿ ಈಶ್ವರಮಂಗಲ
ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಸಮೀಪ ತಿರುವು ರಸ್ತೆ ಭಾಗದಲ್ಲಿ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಅಳವಡಿಸಲಾಗಿದ್ದ ಮೋರಿಯ ಒಂದು ಬದಿ ಕುಸಿತಕ್ಕೊಳಗಾಗಿದ್ದು, ಅಪಾಯಕಾರಿಯಾಗಿದೆ.
ಕಮ್ಮಾಡಿಯಲ್ಲಿ ತಿರುವು ರಸ್ತೆಯಲ್ಲಿನ ಮೋರಿ ತೀರಾ ಹಳೆಯದಾಗಿದೆ. ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ವೇಳೆ ಹಳೇ ಮೋರಿಯನ್ನು ಉಳಿಸಿಕೊಂಡು ಕಾಮಗಾರಿ ನಡೆಸಲಾಗಿತ್ತು. ಈಗ ಮೇಲ್ಮೈ ಕಟ್ಟಿರುವ ಕಲ್ಲುಗಳು ಕುಸಿದು ತೋಡಿಗೆ ಬಿದ್ದಿದ್ದು, ಘನವಾಹನಗಳು ಸಂಚರಿಸುವ ವೇಳೆ ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ. ಹೆದ್ದಾರಿಯ ಬಿಳಿ ಪಟ್ಟಿಯ ತನಕ ಮಣ್ಣು ಕುಸಿದು ಹೋಗಿದೆ. ಇಲ್ಲಿ ಅಳವಡಿಸಿದ್ದ ಸೂಚನಾ ಫಲಕವೂ ಓರೆಯಾಗಿ ನಿಂತಿದೆ.
ಅಪಾಯದ ಸೂಚನೆಯರಿತ ಸಂಪ್ಯ ಪೊಲೀಸರು ಈ ರಸ್ತೆ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ, ವಾಹನ ಸವಾರರಿಗೆ ಅಪಾಯದ ಮುನ್ಸೂಚನೆ ನೀಡುವ ಕೆಲಸ ಮಾಡಿದ್ದಾರೆ.
ಮಾಣಿ- ಮೈಸೂರು ರಾಜ್ಯ ಹೆದ್ದಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಹಸ್ತಾಂತರಿಸಿಕೊಳ್ಳುವ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಹೆದ್ದಾರಿಗೆ ಅಳವಡಿಸಲಾಗಿರುವ ಮೋರಿ, ಸೇತುವೆಗಳ ಗುಣಮಟ್ಟ, ಸಾಮರ್ಥ್ಯ ಪರಿಶೀಲಿಸಿಯೇ ಹಸ್ತಾಂತರಿಸಿಕೊಳ್ಳಬೇಕಿತ್ತು. ಈಗ ಸಂಪ್ಯದಲ್ಲಿ ಅಳವಡಿಸಲಾಗಿರುವ ಮೋರಿ ಬಹಳಷ್ಟು ಹಳೆಯದಾದ ಕಾರಣ ಶಿಥಿಲಗೊಂಡು ಕುಸಿಯತೊಡಗಿದೆ.
– ಎಚ್.ಮಹಮ್ಮದ್ ಆಲಿ, ಆರ್ಯಾಪು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ
ಮೋರಿ ಕುಸಿಯ ತೊಡಗಿರುವ ಕುರಿತು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ಇಲಾಖೆಯಿಂದ ಸಿಬ್ಬಂದಿ ಕಳುಹಿಸಲಾಗಿದೆ. ಮೋರಿಯ ಗುಣಮಟ್ಟ ಚೆನ್ನಾಗಿದ್ದರೆ ದುರಸ್ತಿಪಡಿಸಲು, ಶಿಥಿಲಾವಸ್ಥೆಯಲ್ಲಿದ್ದರೆ ಹೊಸ ಮೋರಿ ನಿರ್ಮಿಸಲು ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು.
– ಹನುಮಂತ್ ಎಂ., ಸಹಾಯಕ ಇಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಇಲಾಖೆ