ಹರಿಪ್ರಸಾದ್ ನಂದಳಿಕೆ ಬೆಳ್ಮಣ್
ರಾಜ್ಯದೆಲ್ಲೆಡೆ ಲಾಕ್ಡೌನ್ನಿಂದ ಉದ್ಯೋಗವಿಲ್ಲದೆ ಅದೆಷ್ಟೋ ಮಂದಿ ಸಮಸ್ಯೆ ಎದುರಿಸುತ್ತಿದ್ದರೂ, ಕೆಲವು ಗ್ರಾಮಸ್ಥರಿಗೆ ನರೇಗಾ ಯೋಜನೆ ಕೈಹಿಡಿದಿದೆ.
ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ಕಡೆ ನರೇಗಾ ಯೋಜನೆಯಡಿ ಕೆಲಸ ನಡೆಯುತ್ತಿದ್ದು ಸುಮಾರು 40ಕ್ಕೂ ಹೆಚ್ಚು ಜನ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಲಾಕ್ಡೌನ್ನಿಂದ ಉದ್ಯೋಗವಿಲ್ಲದ ಕೆಲವರಿಗೆ ಇದರಿಂದ ನೆಮ್ಮದಿ ಲಭಿಸುವಂತಾಗಿದೆ.
ಗ್ರಾಪಂ ವ್ಯಾಪ್ತಿಯ ನಂದಳಿಕೆ ಕೈಯಾರ್ಲ ಎಂಬಲ್ಲಿ ಅಂತರ್ಜಲ ವೃದ್ಧಿಗಾಗಿ ನೂತನ ಕೆರೆ ನಿರ್ಮಾಣ. ನಾಗಂದೊಟ್ಟು ಎಂಬಲ್ಲಿ ಕಿಂಡಿ ಅಣೆಕಟ್ಟು ಮತ್ತು ತೋಡಿನ ಹೂಳೆತ್ತುವ ಕಾಮಗಾರಿ ಪ್ರಗತಿಯಲ್ಲಿದೆ. ಮಟ್ಟಿಕಲ್ಲು ಪರಾಡಿ ಬಳಿ ತೋಡುಗಳ ಹೂಳೆತ್ತುವ ಮತ್ತು ಮಾವಿನಕಟ್ಟೆಯಲ್ಲಿ ಕೆರೆ ನಿರ್ಮಾಣ, ಕೆದಿಂಜೆ ಪರಾಡಿ ಬಳಿ ತೋಡು ಹೂಳೆತ್ತುವ ಕಾಮಗಾರಿಗಳು ಜಲಶಕ್ತಿ ಅಭಿಯಾನದಡಿ ನಡೆಯುತ್ತಿದೆ. ಅಂತರ್ಜಲ ಹೆಚ್ಚಿಸಲು ವಿಶೇಷವಾಗಿ ನೂತನ ಕೆರೆಗಳ ನಿರ್ಮಾಣಕ್ಕೂ ಗ್ರಾಪಂ ಮುಂದಾಗಿದೆ. ಕೈಯಾರ್ಲ ರುದ್ರಭೂಮಿ ಬಳಿ ನೂತನ ಕೆರೆ ನಿರ್ಮಾಣಗೊಳ್ಳುವುದರಿಂದ ಈ ಭಾಗದ ಕೃಷಿ ಭೂಮಿಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ.
ನರೇಗಾ ಮೂಲಕ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಕಾಮಗಾರಿಗಳು ನಡೆಯುತ್ತಿವೆ. ನರೇಗಾ ಮೂಲಕ ಕೆಲಸ ಮಾಡಲಿಚ್ಛಿಸುವ ಗ್ರಾಮಸ್ಥರು ಜಾಬ್ ಕಾರ್ಡ್ ಮಾಡಲು ಪಂಚಾಯಿತಿಯನ್ನು ಸಂಪರ್ಕಿಸಬಹುದು.
ನಿತ್ಯಾನಂದ ಅಮೀನ್
ನಂದಳಿಕೆ ಗ್ರಾಪಂ ಅಧ್ಯಕ್ಷ
ಕರೊನಾ ಸಂಕಷ್ಟ ಕಾಲದಲ್ಲಿ ಕೆಲಸವಿಲ್ಲದ ಜನರಿಗೆ ನರೇಗಾದಲ್ಲಿ ಕೆಲಸ ಒದಗಿಸಿದ್ದರಿಂದ ಸಹಾಯವಾಗಿದೆ. ಜಲಮೂಲಗಳ ಹೂಳೆತ್ತಿರುವುದರಿಂದ ಮುಂದೆ ಜಲಸಂರಕ್ಷಣೆಗೂ ಪೂರಕವಾಗಲಿದೆ.
ಶಂಕರ್
ನಂದಳಿಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ