ಬೆಳಗಾವಿ: ತಾಲೂಕಿನ ಬಂಬರಗಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಅನುದಾನ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಪ್ರಜ್ಞಾವಂತ ನಾಗರಿಕ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಲಾಕ್ಡೌನ್ನಿಂದಾಗಿ ಜಿಲ್ಲೆಯ ಅನೇಕ ಗ್ರಾಪಂಗಳು ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಮೂಲಕ ಆರ್ಥಿಕ ಸಂಕಷ್ಟದಲ್ಲಿದ್ದವರಿಗೆ ನೆರವಾಗಿವೆ. ಆದರೆ, ಬಂಬರಗಿ ಗ್ರಾಪಂನಲ್ಲಿ ನರೇಗಾದಡಿ ಕೆಲಸ ಮಾಡದ ವ್ಯಕ್ತಿಗಳ ಹೆಸರಲ್ಲಿ, ಅವರಿಗೆ ಗೊತ್ತಿಲ್ಲದೆ ಹಣ ಸಂದಾಯ ಮಾಡಲಾಗಿದೆ. ಇದೇ ರೀತಿ ಅನೇಕ ಜನರ ಹೆಸರಲ್ಲಿ ಗ್ರಾಪಂ ಆಡಳಿತ ನಡೆಸುವವರು ಹಣ ಪಡೆದು, ನರೇಗಾ ಯೋಜನೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ನರೇಗಾ ಯೋಜನೆಯಲ್ಲಿ ಅವ್ಯವಹಾರ ಮಾಡಿರುವ ಬಂಬರಗಿ ಗ್ರಾಪಂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ನರೇಗಾ ಯೋಜನೆ ಸಮರ್ಪಕ ರೀತಿಯಲ್ಲಿ ಜಾರಿಗೆ ತಂದು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರವಿ ಹಿರೇಮಠ, ಪ್ರಶಾಂತ ಬಿದರಿ, ಜ್ಯೋತಿಕುಮಾರ ಹುಲೆಣ್ಣವರ, ಬಸವಂತ ಕೋಲೆ, ಆನಂದ ಬಡಿಗೇರ, ಆನಂದ ಕರೋಶಿ, ಗಜಾನನ ಮಾಸೇನಟ್ಟಿ, ಮೋಹನ ದಾಸೇನಟ್ಟಿ, ಆಕಾಶ ಮನಗುತಕರ್ ಇದ್ದರು.