More

    ನಾಲಾಗಳಿಗೆ ತಡೆಗೋಡೆ ನಿರ್ಮಿಸಿ

    ಬೆಳಗಾವಿ: ಕಳೆದ ಮಳೆಗಾಲದಲ್ಲಿ ಪ್ರವಾಹದಿಂದ ನಗರ ಪ್ರದೇಶದಲ್ಲಿ ತೀವ್ರ ಹಾನಿಯುಂಟು ಮಾಡಿದ್ದ ಬಳ್ಳಾರಿ ನಾಲಾ ಪ್ರದೇಶವನ್ನು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಪರಿಶೀಲಿಸಿದರು.

    ನಗರದ ಪ್ರಮುಖ ನಾಲಾ ಆಗಿರುವ ಬಳ್ಳಾರಿ ನಾಲಾ, ಲೇಂಡಿ ನಾಲಾ ಹಾಗೂ ನಾಗಝರಿ ನಾಲಾಗಳ ಎರಡೂ ಬದಿಗೆ ಬೆಳೆದಿರುವ ಕಸವನ್ನು ತಕ್ಷಣ ತೆರವುಗೊಳಿಸಬೇಕು. ನಗರದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಎರಡೂ ಬದಿಗೆ ತಡೆಗೋಡೆ ನಿರ್ಮಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

    ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಗುಜರಾತ್ ರಾಜ್ಯದ ಕೆಲವು ಕಡೆಗಳಲ್ಲಿ ನಾಲಾಗಳ ಮೇಲೆ ಹಾಗೂ ಅಕ್ಕಪಕ್ಕದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಅದೇ ಮಾದರಿಯಲ್ಲಿ ಬಳ್ಳಾರಿ ನಾಲಾದ ಇಕ್ಕೆಲಗಳಲ್ಲೂ ಸೋಲಾರ್ ಪ್ಯಾನಲ್ ಅಳವಡಿಸುವ ಬಗ್ಗೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

    ಬಳ್ಳಾರಿ ನಾಲಾ ಪರಿಶೀಲನೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಸ್ಥಳೀಯ ಮಹಿಳೆಯರು ಶಾಲು ಹೊದಿಸಿ, ಆರತಿ ಬೆಳಗಿದರು. ಅತಿಕ್ರಮಣ ತೆರವಿಗೆ ಶಾಸಕರ ಒತ್ತಾಯ: ನಾಲಾ ಸುತ್ತ ಬೆಳೆದಿರುವ ಕಸ, ಅತಿಕ್ರಮಣ ಹಾಗೂ ಸೂಕ್ತ ತಡೆಗೋಡೆ ನಿರ್ಮಿಸದಿರುವುದರಿಂದ ಮಳೆಗಾಲದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಆದ್ದರಿಂದ ಅತಿಕ್ರಮಣ ತೆರವು ಮತ್ತು ನಾಲಾಗಳ ಸ್ವಚ್ಛತೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ನಾಲಾಗಳ ಎರಡೂ ಬದಿಗೆ ಭದ್ರವಾಗಿ ಕಾಂಕ್ರೀಟ್ ತಡೆಗೋಡೆ ಮರು ನಿರ್ಮಿಸಬೇಕು ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಒತ್ತಾಯಿಸಿದರು. ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು, ಬ್ರಿಟಿಷ್ ಕಾಲದಲ್ಲಿ ನಿರ್ಮಾಣ ಮಾಡಲಾದ ಕಿರುಸೇತುವೆಗಳನ್ನು ಸಚಿವರಿಗೆ ತೋರಿಸಿ, ಇದೇ ಮಾದರಿಯಲ್ಲಿ ನಗರದ ವಿವಿಧ ಕಡೆಗಳಲ್ಲಿ ಸೇತುವೆ ನಿರ್ಮಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

    ಮಳೆಗಾಲದಲ್ಲಿ ತೀವ್ರ ಹಾನಿಯುಂಟು ಮಾಡುತ್ತಿರುವ ಬಳ್ಳಾರಿ ನಾಲಾ ಸ್ವಚ್ಛಗೊಳಿಸುವುದರ ಜತೆಗೆ ಭವಿಷ್ಯದಲ್ಲಿ ಕೂಡ ನಗರದ ಜನರಿಗೆ ಹಾನಿಯಾಗದಂತೆ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಈ ಬಗ್ಗೆ ಮತ್ತೊಮ್ಮೆ ಸಭೆ ಕರೆದು ಕಾಮಗಾರಿಯ ರೂಪುರೇಷೆ ಅಂತಿಮಗೊಳಿಸಲಾಗುವುದು ಎಂದು ಎಂದು ಜಿಲ್ಲಾಧಿಕಾರಿ
    ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಸಚಿವರಿಗೆ ತಿಳಿಸಿದರು. ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ್ ಕೆ.ಎಚ್, ಮಹಾನಗರ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶಕುಮಾರ್ ಹಾಗೂ ಮಹಾನಗರ ಪಾಲಿಕೆಯ ಇನ್ನಿತರ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts