ವಿಜಯಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮೀಣ ಅಭಿವೃದ್ಧಿಗಾಗಿ ಜಾರಿಗೊಳಿಸಿದ ಯೋಜನೆಗಳನ್ನು ಸ್ಥಳೀಯ ಜನ ಸಮುದಾಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಾಗಠಾಣದಲ್ಲಿ 6.26 ಕೋಟಿ ರೂ. ವೆಚ್ಚದ ನಾಗಠಾಣ- ಮಿಂಚನಾಳ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮೀಣ, ಜಿಲ್ಲೆ, ರಾಜ್ಯ, ರಾಷ್ಟ್ರೀಯ ಹೆದ್ದಾರಿ ಹಾಗೂ ಸೇತುವೆಗಾಗಿ ಸಾಕಷ್ಟು ಅನುದಾನ ನೀಡಿದೆ. ಅದರಲ್ಲಿ ನಾಗಠಾಣ ಮಿಂಚನಾಳ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ರಸ್ತೆ ಕಾಮಗಾರಿ ಅನುಷ್ಠಾನಕ್ಕೆ 6.25 ಕೋಟಿ ರೂ. ವಿನಿಯೋಗಿಸಿದ್ದು ಈ ಕಾಮಗಾರಿಯನ್ನು ಗ್ರಾಮಸ್ಥರು ಗುತ್ತಿಗೆದಾರರಿಂದ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುತುವರ್ಜಿ ವಹಿಸಬೇಕು. ಸರ್ಕಾರದ ಯೋಜನೆಗಳು ಸ್ಥಳೀಯ ಸಮುದಾಯಗಳಿಗೆ ಉಪಯೋಗವಾದರೆ ಮಾತ್ರ ಸರ್ಕಾರದ ಯೋಜನೆಗಳಿಗೆ ಮಹತ್ವ ಬರಲು ಸಾಧ್ಯ ಎಂದರು.
ಶಾಸಕ ದೇವಾನಂದ ಚವಾಣ್ ಮಾತನಾಡಿ, ಸರ್ಕಾರದ ಯೋಜನೆಗಳು ಗುಣಮಟ್ಟದಿಂದ ಕೂಡಿರಬೇಕು. ಜನರಿಗೆ ಸದುಪಯೋಗ ಆಗಬೇಕು. ನಾಗಠಾಣ ಮತಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದ್ದು ಕಾಮಗಾರಿಗಳ ಅನುಷ್ಠಾನದಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಜಿ.ಪಂ. ಸದಸ್ಯ ನವೀನ ಅರಕೇರಿ ಮಾತನಾಡಿದರು. ಜಿ.ಪಂ. ಮಾಜಿ ಸದಸ್ಯ ನಿಂಗಪ್ಪ ಮಸಳಿ, ಗ್ರಾಮದ ಹಿರಿಯರು ಭಾಗವಹಿಸಿದ್ದರು. ನವೀನ ಅರಕೇರಿ ತಮ್ಮ ಜಿಪಂ ಅನುದಾನದಲ್ಲಿ ನಾಗಠಾಣ ಗ್ರಾಮದ ಸ್ವಾತಂತ್ರೃ ಯೋಧರ ಸವಿನೆನಪಿಗಾಗಿ ನಿರ್ಮಿಸಿದ ದ್ವಾರ ಬಾಗಿಲು ಉದ್ಘಾಟಿಸಲಾಯಿತು.