ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಭ್ರಷ್ಟಾಚಾರ ಆರೋಪ ಮಾಡಿದ್ದಾರೆ.
ಐಷಾರಾಮಿ ವಿಜಯನಗರ ಲೇಔಟ್ನಲ್ಲಿ ಮುಡಾ ಕೇವಲ 500 ರೂ.ಗೆ ನಿವೇಶನ ಮಂಜೂರು ಮಾಡಿಕೊಟ್ಟಿದೆ ಎಂದು ಶಿವರಾಮು ಆರೋಪಿಸಿದ್ದು, ಪ್ರಕರಣದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದಿದ್ದಾರೆ.
ಹೆಂಡತಿ ಹೆಸರಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಹಂಚ್ಯಾ ಎಂಬುವರು ಸೈಟ್ ಖರೀದಿಸಿದ್ದಾರೆಂದು ಶಿವರಾಮು ದೂರಿದ್ದಾರೆ.
ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ರಹಸ್ಯ ವಿಡಿಯೋ ಕಾರಣ! ಹೊಸ ಬಾಂಬ್ ಸಿಡಿಸಿದ ಡಿಕೆಶಿ
1994ರಲ್ಲಿ ಸರ್ಕಾರಿ ಅಧಿಕಾರಿ ನಾಗರಾಜು ಎಂಬುವವರಿಗೆ ನಿವೇಶನ ಮಂಜೂರಾಗಿತ್ತು. ಆದರೆ, ಅದೇ ಸಮಯದಲ್ಲಿ ಬೆಂಗಳೂರಿನಲ್ಲಿ ಸೈಟ್ ಹಂಚಿಕೆಯಾದ ಕಾರಣ ಸರ್ಕಾರಿ ಅಧಿಕಾರಿ ಎರಡು ಸೈಟ್ ಹೊಂದಿರಬಾರದು ಎಂಬ ನಿಯಮದಡಿ ನಾಗರಾಜು ಅವರು ಮೈಸೂರು ನಿವೇಶನವನ್ನು ಮುಡಾಕ್ಕೆ ವಾಪಸ್ಸು ನೀಡಿ, ಹಣವನ್ನು ವಾಪಸ್ಸು ಪಡೆದಿದ್ದರು. ಆದರೆ, ಸೈಟ್ ವಾಪಸ್ಸು ಪಡೆದ ಮುಡಾ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿ ಹಾಕಿರಲಿಲ್ಲ. ಇದಾದ ಅನೇಕ ವರ್ಷಗಳ ಬಳಿಕ ನಾಗರಾಜು ಪತ್ನಿ ಶಶಿಕಲಾ ಹೆಸರಿನಲ್ಲಿ ಸೈಟ್ ವರ್ಗಾವಣೆ ಮಾಡಿಸಿಕೊಂಡ ನಂದೀಶ್ ಹಂಚ್ಯಾ ಅದೇ ದಿನವೇ ತಮ್ಮ ಪತ್ನಿ ದೀಪಾ ಹೆಸರಿನಲ್ಲಿ ಕ್ರಯಪತ್ರ ಮಾಡಿಸಿಕೊಂಡಿದ್ದಾರೆಂದು ಶಿವರಾಮು ಆರೋಪಿಸಿದ್ದಾರೆ.
ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ, ಪುತ್ರ ವಿಜಯೇಂದ್ರ ಹೆಸರನ್ನೂ ಸಹ ದುರ್ಬಳಕೆ ಮಾಡಿಕೊಂಡು 3 ಕೋಟಿ ರೂ. ಸೈಟ್ ಅನ್ನು ನಂದೀಶ್ ಹಂಚ್ಯಾ ಲಪಟಾಯಿಸಿದ್ದಾರೆಂದು ಶಿವರಾಮು ಗಂಭೀರ ಆರೋಪ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)
ಸಂತೋಷ್ ಆತ್ಮಹತ್ಯೆ ಯತ್ನ ಕುರಿತ ಊಹಾಪೋಹಕ್ಕೆ ಸ್ಪಷನೆ ಕೊಟ್ಟ ಸಿಎಂ ಪುತ್ರ