ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಮಂಜುನಾಥ್ ನಡುವಿನ ಆರೋಪ-ಪ್ರತ್ಯಾರೋಪ ಸರಣಿ ಮುಂದುವರಿದಿದ್ದು, ಶಾಸಕರ ಆರೋಪಕ್ಕೆ ಜಿಲ್ಲಾಧಿಕಾರಿ ಪತ್ರದ ಮೂಲಕ ತಿರುಗೇಟು ನೀಡಿದ್ದಾರೆ.
ರೋಹಿಣಿ ಸಿಂಧೂರಿ ಅವರ ವಿರುದ್ಧ ಸಚಿವರಿಗೆ ಹುಣಸೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಮಂಜುನಾಥ್ ನೇರವಾಗಿ ದೂರು ನೀಡಿದ್ದರು. ನಾನು ಬರೆದ ಒಂದು ಪತ್ರಕ್ಕೂ ಡಿಸಿ ಉತ್ತರ ನೀಡುತ್ತಿಲ್ಲ. ಹುಣಸೂರು ತಾಲೂಕಿನಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದ್ದರು.
ಇದೀಗ ಶಾಸಕರ ಆರೋಪಕ್ಕೆ ಪತ್ರದ ಮೂಲಕವೇ ತಿರುಗೇಟು ನೀಡಿರುವ ರೋಹಿಣಿ ಸಿಂಧೂರಿ, ಕ್ಷೇತ್ರದ ಅಭಿವೃದ್ಧಿ ಕಾರ್ಯ ಕುರಿತ ಯಾವ ಪತ್ರಗಳೂ ತಮ್ಮಿಂದ ಬಂದಿಲ್ಲ. ನಿಮ್ಮ ವೈಯಕ್ತಿಕ ಆಸ್ತಿ ವಿಚಾರವಾಗಿ ಅರ್ಜಿಗಳಿವೆ. ಮೈಸೂರು ತಾಲೂಕಿನಲ್ಲಿ ಕೇರ್ಗಳಿ ಗ್ರಾಮದ ಹಲವು ಸರ್ವೆ ನಂಬರ್ಗಳ ಭೂ ಪರಿವರ್ತನೆ ಅರ್ಜಿಗಳಿದ್ದು, ಅದರ ವಿಲೇವಾರಿಯನ್ನು ಕಾನೂನು ಪ್ರಕಾರವೇ ಮಾಡುತ್ತೇವೆ ಎಂದಿದ್ದಾರೆ.
ನಾಡಹಬ್ಬದ ಗಜಪಯಣ ಸಂದರ್ಭ ಕ್ಷೇತ್ರದ ಶಾಸಕನಾದ ನನಗೆ ಆಹ್ವಾನ ನೀಡಲಿಲ್ಲ. ಗಜಪಯಣಕ್ಕೂ ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂಬ ಶಾಸಕರ ಆರೋಪಕ್ಕೆ, ಗಜಪಯಣದಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ದಸರಾ ಉನ್ನತ ಸಮಿತಿ ಸಭೆ ತೀರ್ಮಾನದಂತೆ ನಡೆದುಕೊಳ್ಳಲಾಗಿದೆ ಎಂದು ಉತ್ತರ ನೀಡಿದ್ದಾರೆ.
ಹುಣಸೂರಿಗೆ ಪ್ರಗತಿ ಪರಿಶೀಲನೆಗೆ ಭೇಟಿ ನೀಡಿದ್ದಾಗ ತಾವು ಅನಾರೋಗ್ಯದಿಂದ ಇದ್ದ ಕಾರಣ, ನಿಮ್ಮ ಜತೆ ಚರ್ಚೆ ಸಾಧ್ಯವಾಗಿಲ್ಲ. ಕೆಡಿಪಿ ಸಭೆಯಲ್ಲಿ ನೀವು ನೀಡಿರುವ ಹೇಳಿಕೆ ಯಾರಿಗೂ ಶೋಭೆ ತರುವುದಿಲ್ಲ. ಹೇಳಿಕೆ ನೀಡುವ ಮುನ್ನ ವಾಸ್ತವಾಂಶ ಗಮನಿಸಿ ಎಂದು ಎಚ್.ಪಿ.ಮಂಜುನಾಥ್ಗೆ ರೋಹಿಣಿ ಸಿಂಧೂರಿ ಪತ್ರ ಬರೆದಿದ್ದಾರೆ.
ಮೊನ್ನೆ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿ ವಿರುದ್ಧ ಹರಿಹಾಯ್ದಿದ್ದ ಮಂಜುನಾಥ್, ಮೈಸೂರಿಗೆ ಇಬ್ಬರು ಮಹಾರಾಣಿ ಇದ್ದಾರೆ. ಮೂರನೇ ಮಹಾರಾಣಿಯ ಅವಶ್ಯಕತೆ ಇಲ್ಲ. ಮಹಾರಾಣಿಯಾಗಿ ಮೆರೆಯಬೇಡಿ. ಅಧಿಕಾರಿಯಾಗಿ ವರ್ತಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಕಿಡಿಕಾರಿದ್ದರು. (ದಿಗ್ವಿಜಯ ನ್ಯೂಸ್)