ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ತಾನು ಮೈಸೂರು ಭಾಗದ ಹುಲಿ ಎಂದು ಅಬ್ಬರಿಸುತ್ತಿದ್ದರು. ಆ ಹುಲಿಯನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಿಡಿದು ಬೋನಿಗೆ ಹಾಕಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ಕಾಂಗ್ರೆಸ್ನ ಶಾಂತಕುಮಾರಿ ನಾಮಪತ್ರ ಸಲ್ಲಿಸಿದ್ದರು. ಅವರದ್ದೇ ಪಕ್ಷದ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಸದಸ್ಯ ವೋಟು ಹಾಕಿಲ್ಲ. ಕೈ ಎತ್ತದಂತೆ ಕಟ್ಟಿಹಾಕಿದವರು ಯಾರು? ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ನಾವು ಪ್ರಮಾಣಿಕ ಪ್ರಯತ್ನ ಮಾಡಿದೆವು, ಸೋತಿದ್ದೇವೆ. ಆದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ನ ಹೀನಾಯಸ್ಥಿತಿ ಬಯಲಾಗಿದೆ ಎಂದು ಕುಟುಕಿದರು. ಇದನ್ನೂ ಓದಿರಿ ರಾಜ್ಯದಲ್ಲಿ ಈ ಭಾರಿ 110 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!
ಮೈಸೂರು ಪಾಲಿಕೆಯ ಅಧಿಕಾರ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಒಲಿದಿದ್ದು, ಮೇಯರ್ ಸ್ಥಾನಕ್ಕೆ ಜೆಡಿಎಸ್ನ ರುಕ್ಮಿಣಿ ಮಾದೇಗೌಡ, ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನ ಅನ್ವರ್ ಬೇಗ್ ಆಯ್ಕೆ ಆಗಿದ್ದಾರೆ. ಮೊದಲ ಬಾರಿ ಮೇಯರ್ ಪಟ್ಟ ಅಲಂಕರಿಸೋ ಆಸೆಯಲ್ಲಿದ್ದ ಬಿಜೆಪಿ ಸೋತಿದೆ. ಈ ಕುರಿತು ಪ್ರತಾಪ್ ಸಿಂಹ, ಮೈಸೂರಿನ ಹುಲಿ ಎಂದು ಅಬ್ಬರಿಸುತ್ತಿದ್ದ ಸಿದ್ದರಾಮಯ್ಯರನ್ನ ಎಚ್ಡಿಕೆ ಬೋನಿಗೆ ಹಾಕಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಮೇಯರ್ ಚುನಾವಣಾ ಫಲಿತಾಂಶದ ಬಳಿಕ ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಚಿವ ತನ್ವೀರ್ ಸೇಠ್, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕೊನೇ ಹಂತದ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದೇವೆ. ಒಪ್ಪಂದದ ಪ್ರಕಾರ ನಮಗೆ ಮೇಯರ್ ಸ್ಥಾನ ಸಿಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಬಿಜೆಪಿಗೆ ಸಿಗುವ ಲಕ್ಷಣ ಇದ್ದ ಕಾರಣ ನಾವು ಕಾರ್ಯತಂತ್ರ ಬದಲಿಸಿ ಮೇಯರ್ ಸ್ಥಾನ ಬಿಟ್ಟುಕೊಟ್ಟೆವು. ಜೆಡಿಎಸ್ ನಮಗೆ ಬೆಂಬಲ ಕೇಳಿತ್ತು, ಕೇಳಿಲ್ಲ ಎಂಬುದು ಬೇರೆ ಪ್ರಶ್ನೆ. ನಮಗೆ ನಮ್ಮ ಉದ್ದೇಶ ಈಡೇರಬೇಕಿತ್ತು ಅಷ್ಟೆ ಎಂದರು.
ಅಲ್ಲದೆ ಹುಲಿಯನ್ನು ಬೋನಿಗೆ ಹಾಕಿದ್ದಾರೆಂಬ ಪ್ರತಾಪ್ಸಿಂಹ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಹುಲಿಯನ್ನು ಬೋನಿಗೆ ಹಾಕುವುದು ಹಳೇ ಸಂಸ್ಕೃತಿ. ಆದರೆ, ಮಂಗಗಳು ಎಲ್ಲಿರ್ತಾವೆ? ಎಂದು ಪ್ರತಾಪ್ ಸಿಂಹರನ್ನ ಕೇಳಿ ಎಂದರು.
ರಾಜ್ಯದಲ್ಲಿ ಈ ಭಾರಿ 110 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!